ವಿಜಯಪುರ: ದೇಶದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಆದರೆ ಕೆಲವರು ಮಾತ್ರ ಲಾಕ್ಡೌನ್ಗೆ ಕ್ಯಾರೆ ಅನ್ನದೇ ಎಲ್ಲೆಡೆ ಸುತ್ತಾಡುತ್ತಿದ್ದಾರೆ. ಇಂತಹ ಮಂದಿಗೆ ಬಿಸಿಮುಟ್ಟಿಸಲು ಈಗ ವಿಜಯನಗರದಲ್ಲಿ ಓಬವ್ವ ಪಡೆ ಫೀಲ್ಡ್ಗೆ ಇಳಿದಿದೆ.
ಲಾಕ್ಡೌನ್ ಆಗಿದ್ದರೂ ನಗರದ ಬಹುತೇಕ ಬೀದಿಗಳಲ್ಲಿ ಜನರು ಎಂದಿನಂತೆ ಓಡಾಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ವಿಜಯಪುರದ ಓಬವ್ವ ಪಡೆ ಫೀಲ್ಡ್ಗೆ ಇಳಿದಿದ್ದು, ಮನೆಯಲ್ಲಿ ಇರಿ ಎಂದರೆ ಊರು ತುಂಬಾ ಓಡಾಡುತ್ತಿರುವ ಜನರಿಗೆ ಲಾಠಿಯ ಬಿಸಿ ಬಿಸಿ ಕಜ್ಜಾಯವನ್ನ ಓಬವ್ವ ಪಡೆ ನೀಡುತ್ತಿದೆ. ವಿಜಯಪುರದ ಓಣಿ, ಕಾಲೋನಿಗಳಿಗೆ ಹೊಕ್ಕಿ ವಿನಾಕಾರಣ ಅಡ್ಡಾಡುತ್ತಿದ್ದವರಿಗೆ ಓಬವ್ವ ಪಡೆ ಸಿಬ್ಬಂದಿ ಧರ್ಮದೇಟು ನೀಡುತ್ತಿದ್ದಾರೆ.
ಬೈಕ್ ಮೇಲೆ ಬೀದಿ ಬೀದಿ ಅಡ್ಡಾಡುತ್ತಿದ್ದ ಯುವಕನಿಗೆ ಕಪಾಳ ಮೋಕ್ಷ ಮಾಡಿ, ಮನೆ ಹೊರಗೆ ಕಾಣಿಸಿದವರಿಗೆ ಲಾಠಿ ಬೀಸುತ್ತಿದ್ದಾರೆ. ವಿಜಯಪುರ ನಗರದ ಹಕ್ಕಿಂ ಚೌಕ್, ಬೆಂಡಿಗೇರಿ ಓಣಿ, ಜಾಮಿಯಾ ಮಸೀದ್, ಜೆಂಡಾ ಕಟ್ಟಿ ಬಳಿ ವಿನಾಕಾರಣ ಅಡ್ಡಾಡುತ್ತಿದ್ದವರಿಗೆ ಸಕತ್ ಒದೆಬಿದ್ದಿದೆ.