ವಿಜಯಪುರ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಜಿ.ಪಂ ಬಿಜೆಪಿ ಉಪಾಧ್ಯಕ್ಷನಿಂದ ಖಡ್ಗ ಪ್ರದರ್ಶನ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮೆರವಣಿಗರ ವೇಳೆ ಖಡ್ಗ ಪ್ರದರ್ಶನ ಮಾಡಿದ್ದು, ಖಡ್ಗ ಪ್ರದರ್ಶನಕ್ಕೆ ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮುದ್ದೇಬಿಹಾಳ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಕೂರಿಸಿದ್ದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಪ್ರಭುಗೌಡ ದೇಸಾಯಿ, ನಾನು ಖಡ್ಗ ಪ್ರದರ್ಶನ ಮಾಡಿದರಲ್ಲಿ ಬೇರೆ ಯಾವ ಉದ್ದೇಶವಿಲ್ಲ. ದೇವರ ವಿಚಾರವಾಗಿ ನಾನು ಅದನ್ನು ಹಿಡಿದುಕೊಂಡೆ. ಆದರಲ್ಲಿ ಯಾವುದೇ ಕೆಟ್ಟ ಸಂದೇಶವಿಲ್ಲ. 25 ವರ್ಷದಿಂದ ನಾನು ರಾಜಕೀಯದಲ್ಲಿ ಇದ್ದೇನೆ ನನ್ನ ಮೇಲೆ ಇಲ್ಲಿಯವರೆಗೂ ಯಾವುದೇ ಕೇಸ್ ಆಗಿಲ್ಲ. ನಮ್ಮ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ದೇಸಾಯಿ ಸ್ಪಷ್ಟೀಕರಣ ನೀಡಿದರು.
ಸಾರ್ವಜನಿಕರಿಂದ ಸಣ್ಣ ತಪ್ಪಾದ್ರೆ ಕೂಡಲೇ ಕಾರ್ಯಪ್ರವೃತ್ತರಾಗುವ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ. ಒಂದು ವೇಳೆ ಸಾಮಾನ್ಯ ವ್ಯಕ್ತಿ ಈ ರೀತಿ ಮಾಡಿದ್ದರೆ ಪೊಲೀಸರು ಸುಮ್ಮನೆ ಇರುತ್ತಿದ್ದರಾ? ಮೆರವಣಿವಣಿಗೆ ವೇಳೆ ಖಡ್ಗ ಪ್ರದರ್ಶಿಸಿರುವ ಪ್ರಭುಗೌಡ ದೇಸಾಯಿ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳುವಂತೆ ಸಾರ್ಜನಿಕರು ಆಗ್ರಹಿಸಿದ್ದಾರೆ.