ವಿಜಯಪುರ: ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಸಿಎಂ ಕನಸು ಕಂಡಿದ್ದಾರೆ. ಆದರೆ ಯಡಿಯೂರಪ್ಪವರಿಗೆ ಕಿರುಕುಳ ಆಗುತ್ತಿದ್ದು, ಎಲ್ಲ ಶಾಸಕರು ಸಹಕಾರ ನೀಡಬೇಕೆಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವಿಷಯವನ್ನು ಪರೋಕ್ಷವಾಗಿ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಅದಕ್ಕಾಗಿ ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ನಮ್ಮನ್ನು ಮಂತ್ರಿ ಮಾಡದೆ ಇದ್ದರೂ ಪರವಾಗಿಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪವರಿಗೆ ಕಿರುಕುಳ ಆಗುತ್ತಿದೆ. ಯಡಿಯೂರಪ್ಪವರಿಗೆ ಎಲ್ಲ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಅನರ್ಹ ಶಾಸಕರಿಂದ ನಮ್ಮ ಬಿಜೆಪಿ ಸರ್ಕಾರ ಅಸ್ತಿತ್ವ ಬಂದಿದೆ. ಅನರ್ಹ ಶಾಸಕರು ಸಾಕಷ್ಟು ನೊಂದಿದ್ದಾರೆ. ರಾಜೀನಾಮೆ ನೀಡಿದ ಮೇಲೆ ಅನರ್ಹ ಶಾಸಕರಿಗೆ ಚಿತ್ರಹಿಂಸೆ ಆಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದು ಆಗಲಿ ಎಂದರು. ಅಲ್ಲದೆ ಅನರ್ಹ ಶಾಸಕರು ಮಂತ್ರಿಗಳಾಗಲಿ ಎಂದು ಹಾರೈಸಿದರು.
ಸಂತ್ರಸ್ತರಿಗೆ 10 ಸಾವಿರ ಹೆಚ್ಚು ಎನ್ನುವ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಬಹಳ ಅನ್ಯಾಯವಾದಾಗ ಧ್ವನಿ ಎತ್ತುತ್ತೇನಿ. ಅದು ನನ್ನ ಪಕ್ಷ ಅಥವಾ ಬೇರೆ ಪಕ್ಷವಿದರೂ ಅನ್ಯಾಯ ಪರಾಕಾಷ್ಠೆ ಬಂದಾಗ ಉತ್ತರ ಕರ್ನಾಟಕದ ಪರ ಧ್ವನಿ ಮಾಡುತ್ತೇನೆ. ಸದ್ಯ ಈಶ್ವರಪ್ಪ ಹೇಳಿಕೆ ಪರ ಹಾಗೂ ವಿರೋಧ ಮಾಡಲ್ಲ. ಅದಕ್ಕಾಗಿ ನನ್ನನ್ನು ಬಲಿಪಶು ಮಾಡಬೇಡಿ ಎಂದು ಹೇಳಿದರು.