ವಿಜಯಪುರ: ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂದು ಮಗನೊಬ್ಬ ತಂದೆಯನ್ನ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಮಹಾರಾಷ್ಟ್ರ ಗಡಿಯ ಟಾಕಳಿ ಗ್ರಾಮದಲ್ಲಿ ನಡೆದಿದೆ.
ಕೊಲೆ ಮಾಡಿದ ಪಾಪಿ ಮಗನನ್ನು ಸಂಜೀವ ತೊರವಿ (38) ಎಂದು ಗುರುತಿಸಲಾಗಿದೆ, ಕುಡಿತಕ್ಕೆ ದಾಸನಾಗಿದ್ದ ಈತ ಕುಡಿಯಲು ಹಣ ಕೊಡಲಿಲ್ಲ ಎಂದು ತನ್ನ ಸ್ವಂತ ತಂದೆ ಅಣ್ಣಪ್ಪ ತೊರವಿ (58) ಯನ್ನು ಕೊಲೆ ಮಾಡಿದ್ದಾನೆ.
ಬುಧವಾರ ಬೆಳಗ್ಗೆ ತಂದೆ ಅಣ್ಣಪ್ಪ ಬಳಿ 1 ಸಾವಿರ ರೂಪಾಯಿ ಕೇಳಿ ಪಡೆದು ಕುಡಿದು ಬಂದಿದ್ದ ಸಂಜೀವ ಮತ್ತೆ ರಾತ್ರಿ ಕುಡಿಯಲು 500 ರೂ. ಕೇಳಿದ್ದಾನೆ. ಇದರಿಂದ ಕೋಪಗೊಂಡ ತಂದೆ ಕೊಡಲ್ಲ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಕೋಪಗೊಂಡ ಮಗ ಸಂಜೀವ ಮನೆಯಲ್ಲಿ ಇದ್ದ ಕೊಡಲಿಯಿಂದ ಅಪ್ಪನ ಕುತ್ತಿಗೆಯನ್ನು ಕಡಿದು ಹಾಕಿದ್ದಾನೆ. ಇದನ್ನು ಓದಿ: ಪಬ್ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ
ಮನೆಯವರೆಲ್ಲ ಗ್ರಾಮ ದೇವರ ಜಾತ್ರೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರಂ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಡಚಣ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ಅನ್ವಯ ಪ್ರಕರಣ ದಾಖಲಾಗಿದೆ.