– ನಿಖಿಲ್ ನಿರುದ್ಯೋಗಿಯಾಗೋದು ಪಕ್ಕಾ
ವಿಜಯಪುರ: ದುಡ್ಡು ತಿಂದವರೆಲ್ಲರನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೀಗ ಅವರ ಮಾತು ನಿಜವಾಯಿತು ಎಂದು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ದೋಸ್ತಿ ಸರ್ಕಾರಕ್ಕೆ ಟಾಂಗ್ ನೀಡಿದ್ರು.
ನಗರದಲ್ಲಿ ಪ್ರಬುದ್ಧರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಟಿ ದಾಳಿ ರಾಜ್ಯದಲ್ಲಿ ರಾಜಕೀಯ ಭೂಕಂಪ ಉಂಟು ಮಾಡಿತು. ನಂತರ ಸಿಎಂ, ಸಂಪುಟ ಸಚಿವರು, ಕಾಂಗ್ರೆಸ್ ಮುಖಂಡರು ರಸ್ತೆಗೆ ಬಂದು ಪ್ರತಿಭಟನೆ ನಡೆಸಿದರು. ದುಡ್ಡು ತಿಂದವರೆಲ್ಲರನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದು ಮೋದಿ ಈ ಹಿಂದೆ ಹೇಳಿದ ಮಾತು ಇಂದು ನಿಜವಾಯಿತು ಅಂದ್ರು.
ಅಲ್ಲದೆ ಸಿಎಂ ಕುಮಾರಸ್ವಾಮಿ ಯೋಧರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಚುನಾವಣೆಯಲ್ಲಿ ನಿಖಿಲ್ ಗೆಲ್ಲಲ್ಲ, ನಿಖಿಲ್ ಮಾಡುವ ಸಿನಿಮಾ ಓಡಲ್ಲ. ಚುನಾವಣೆ ನಂತರ ಸಿಎಂ ಎಚ್ಡಿ ಕುಮಾರಸ್ವಾಮಿ ಮಗ ನಿಖಿಲ್ ನಿರುದ್ಯೋಗಿ ಆಗೋದು ಪಕ್ಕಾ ಎಂದು ವ್ಯಂಗ್ಯವಾಡಿದರು.
ಆಗ ಕುಮಾರಸ್ವಾಮಿ ನಿಖಿಲ್ನನ್ನು ಸೇನೆಗೆ ಸೇರಿಸಲಿ. ಅಲ್ಲಿ ಪರಿಸ್ಥಿತಿ ಹೇಗಿರುತ್ತೆ ಅನ್ನೋದು ಗೊತ್ತಾಗುತ್ತೆ. ನಮ್ಮ ಸೈನಿಕರು ಯಾವತ್ತೂ ಶತ್ರುಗಳ ಗುಂಡಿಗೆ ಬೆನ್ನು ಕೊಟ್ಟಿಲ್ಲ. ಬೆನ್ನಿಗೆ ಗುಂಡು ಬಿದ್ದು ಹುತಾತ್ಮರಾದ ಉದಾಹರಣೆಯೂ ಇಲ್ಲ. ಸೈನಿಕರು ಗುಂಡಿಗೆ ಎದೆಯೊಡ್ಡಿದ್ದಾರೆಂದು ಸೈನಿಕರ ಸಾಧನೆಯನ್ನು ಶ್ಲಾಘಿಸಿ ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಸಂವಾದ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಆಹ್ವಾನಿಸಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಂ ಜಿರಾಳೆ ಬಿ.ಎಲ್ ಸಂತೋಷ್ ಗೆ ಪ್ರಶ್ನಿಸಿದರು. ಆಗ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ನಂತರ ಸಂತೋಷ್ ಮಾತನಾಡಿ, ಪಕ್ಷದ ಆಂತರಿಕ ವಿಚಾರ. ಯಾರನ್ನು ಎಲ್ಲಿ ಕರೆಯಬೇಕೆಂಬುದು ಪಕ್ಷಕ್ಕೆ ಗೊತ್ತಿದೆ ಎಂದರು.