ವಿಜಯಪುರ: ಜಿಲ್ಲೆಯಲ್ಲಿ ಹನಿ ನೀರಿಗೂ ತತ್ವಾರ. ಆದರೆ ಪಕ್ಕದ ರಾಜ್ಯಕ್ಕೆ ಇಲ್ಲಿನ ಡ್ಯಾಂನಿಂದ ನೀರು ಬಿಡಲು ಸರ್ಕಾರ ಆದೇಶಿಸಿದೆ. ಕೃಷ್ಣೆಯ ನೀರನ್ನು ಬೇರೊಂದು ರಾಜ್ಯಕ್ಕೆ ಬಿಡುವ ಮೂಲಕ ಸಚಿವರು ಕೂಡ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿಜಯಪುರ- ಬಾಗಲಕೋಟೆ ಜಿಲ್ಲೆಯ ಮಕ್ಕಳ ನೀರಿನ ದಾಹ ತಣಿಯದಿದ್ದರೂ ಚಿಂತೆಯಿಲ್ಲ ತೆಲಂಗಾಣಕ್ಕೆ ಕೃಷ್ಣೆಯ ನೀರು ಹರಿಸಲಾಗಿದೆ. ಅವಳಿ ಜಿಲ್ಲೆಯಲ್ಲಿ ಹನಿನೀರಿಗೂ ತತ್ವಾರ ಎದುರಾಗಿ ಪ್ರತಿಯೊಬ್ಬರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಆದರೂ ಆಲಮಟ್ಟಿಯಿಂದ ನಾರಾಯಣಪುರ ಡ್ಯಾಂಗೆ 2 ಟಿಎಂಸಿ ನೀರನ್ನ ಜಲಾಶಯಕ್ಕೆ ಹರಿಸಲಾಗಿದೆ.
ಜಿಲ್ಲೆಯ ಜನರಿಗೆ ನೀರು ಕೊಡದಿದ್ದರಿಂದ ಜೋಳ, ಗೋಧಿ ಮೊದಲಾದ ಬೆಳೆಗಳು ರೈತನ ಕೈಗೆ ಬರಲಿಲ್ಲ. ರೈತರು ಪ್ರತಿಭಟನೆ ನಡೆಸಿ ಹಿಂಗಾರು ಹಂಗಾಮಿಗೆ ಕಾಲುವೆಗಳಿಂದ ನೀರು ಹರಿಸುವಂತೆ ಒತ್ತಾಯಿಸಿದ್ದರು. ಆದರೆ ರೈತರ ಈ ಬೇಡಿಕೆಯನ್ನು ಸರ್ಕಾರ ಮನ್ನಿಸದೇ ಮತ್ತೊಂದು ರಾಜ್ಯಕ್ಕೆ ನೀರು ಹರಿಸುತ್ತಿರುವುದು ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ ಎಂದು ರೈತ ಸದಾಶಿವ ಹೇಳಿದ್ದಾರೆ.
ಅವಳಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹೇಳಿದ್ದಾರೆ. ಕೊಯ್ನಾ ಜಲಾಶಯದಿಂದ ನೀರು ತರಿಸಿಕೊಳ್ಳಲು ಗಂಭೀರ ಆಸಕ್ತಿ ತಾಳದ ರಾಜ್ಯ ಸರ್ಕಾರ ಈಗ ತೆಲಂಗಾಣಕ್ಕೆ ನೀರು ಬಿಡುವ ವಿಷಯದಲ್ಲಿ ವಿಶೇಷ ಆಸಕ್ತಿ ತೋರಿಸಿ ಅನ್ನದಾತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.