ವಿಜಯಪುರ: ಟ್ಯೂಷನ್ ಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ಎರಡು ಕೈಗೆ ಬರೆ ಹಾಕಿದ ಅಮಾನವೀಯ ಘಟನೆ ವಿಜಯಪುರ ನಗರದ ಮಾರುತಿ ಕಾಲೊನಿಯಲ್ಲಿ ನಡೆದಿದೆ.
ಆರು ವರ್ಷದ ವಿದ್ಯಾರ್ಥಿ ಶುಭಂ ರಾಠೋಡ್ ಮೇಲೆ ಟ್ಯೂಷನ್ ಶಿಕ್ಷಕಿ ಪಲ್ಲವಿ ಶರ್ಮಾ ಬರೆ ಹಾಕಿದ್ದಾಳೆ. ವಿಜಯಪುರದ ಮಾರುತಿ ನಗರದ ತನ್ನ ಮನೆಯಲ್ಲಿ ಪಲ್ಲವಿ ಶರ್ಮಾ ಟ್ಯೂಷನ್ ಹೇಳಿಕೊಡುತ್ತಿದ್ದು ಇಲ್ಲಿಗೆ ಒಂದನೇ ತರಗತಿ ಓದುತ್ತಿದ್ದ ಶುಭಂ ಕೂಡಾ ಟ್ಯೂಷನ್ಗೆ ಹೋಗುತ್ತಿದ್ದ.
ಎರಡು ದಿನಗಳ ಹಿಂದೆ ಶುಭಂ ಟ್ಯೂಷನ್ಗೆ ತಡವಾಗಿ ಹೋಗಿದ್ದಕ್ಕೆ, ಆತನನ್ನು ಶಿಕ್ಷಕಿ ಪಲ್ಲವಿ ಹಿಡಿದು, ಕೂರಿಸಿ ಎರಡು ಕೈಗಳಿಗೆ ಬರೆ ಹಾಕಿದ್ದಾಳೆ. ಶಿಕ್ಷಕಿಯ ವರ್ತನೆಯಿಂದ ಕೋಪಗೊಂಡು ಏಕೆ ಹೀಗೆ ಮಾಡಿದ್ದು ಎಂದು ವಿಚಾರಿಸಿದ್ದಕ್ಕೆ ನಮ್ಮ ಮೇಲೆಯೇ ಪಲ್ಲವಿ ರೇಗಾಡಿ, ಧಮ್ಕಿ ಹಾಕಿದ್ದಾಳೆ ಎಂದು ವಿದ್ಯಾರ್ಥಿಯ ತಾಯಿ ಅನಿತಾ ರಾಠೋಡ ಆರೋಪಿಸಿದ್ದಾರೆ. ಈ ಕುರಿತು ಶುಭಂ ಪೋಷಕರು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews