ಬಳ್ಳಾರಿ: ಸದಾ ಒಂದಲ್ಲೊಂದು ವಿವಾದದಿಂದ ಸುದ್ದಿಯಾಗುವ ಬಳ್ಳಾರಿಯ (Ballari) ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ (Vijayanagara Sri Krishnadevaraya University) ಈ ಬಾರಿ ಡಿ ಗ್ರೂ ಸಿಬ್ಬಂದಿ ಕುಲಸಚಿವರ ಸಹಿಯನ್ನೇ ನಕಲು ಮಾಡಿ ಸಿಕ್ಕಿ ಬಿದ್ದಿದ್ದಾನೆ.
ವಿದ್ಯಾರ್ಥಿಗಳ ವಲಸೆ ಪ್ರಮಾಣಪತ್ರಕ್ಕೆ (Migration Certificate) ಉಪಕುಲಸಚಿವರ ಸಹಿಯನ್ನು ಡಿ ಗ್ರೂಪ್ ನೌಕರ ವೈ.ಕೃಷ್ಣಮೂರ್ತಿ ನಕಲು ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ವಿವಿಯ ಕುಲಪತಿ ವಿಚಾರಣೆ ಕಾಯ್ದಿರಿಸಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್
ಗಂಗಾವತಿಯ ಕೆಲವು ವಿದ್ಯಾರ್ಥಿಗಳು ವಲಸೆ ಪ್ರಮಾಣ ಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳ ಸತ್ಯಾಸತ್ಯತೆ ತಿಳಿಯಲು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ವಿವಿಯ ಸಿಬ್ಬಂದಿ ಕರೆ ಮಾಡಿದ್ದರು.
ಈ ವೇಳೆ ಶುಲ್ಕ ಪಾವತಿಸಿ ಪ್ರಮಾಣ ಪತ್ರ ಪಡೆದಿರುವುದಾಗಿ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ವಿವಿಗೆ ಯಾವುದೇ ಶುಲ್ಕ ಪಾವತಿಯಾಗದೇ ಪ್ರಮಾಣ ಪತ್ರಗಳು ವಿತರಣೆಯಾಗಿರುವ ಹಿನ್ನೆಲೆ ಅನುಮಾನಗೊಂಡು ಮತ್ತಷ್ಟು ವಿಚಾರಣೆ ಮಾಡಿದಾಗ ಸತ್ಯ ಪ್ರಕಟವಾಗಿದೆ.
ವಿದ್ಯಾರ್ಥಿಗಳಿಂದ ಹಣ ಪಡೆದ ಕೃಷ್ಣಮೂರ್ತಿ ಉಪ ಕುಲಸಚಿವರ ನಕಲಿ ಸಹಿ ಮಾಡಿ ಪ್ರಮಾಣ ಪತ್ರ ವಿತರಿಸಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಈಗ ನಿಗದಿತ ಶುಲ್ಕ ನೀಡಿ ನಕಲಿ ಸಹಿ ಹೊಂದಿದ ವಲಸೆ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿದ್ದಾರೆ.