ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ಆಷಾಢದ ಮೊದಲ ದಿನವೇ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾದಂತೆ ಕಾಣುತ್ತಿದೆ. ಹೊಸಪೇಟೆಯ ಆನಂದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜಿಂದಾಲ್ಗೆ ಭೂಮಿ ನೀಡಿದ್ದನ್ನು ನೆಪವಾಗಿಟ್ಟುಕೊಂಡು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಜಿಂದಾಲ್ಗೆ ಭೂಮಿ ನೀಡುವ ವಿಚಾರದ ಬಗ್ಗೆ ಸ್ಥಳಿಯ ಶಾಸಕರ ಮಾತಿಗೆ ಬೆಲೆ ನೀಡದ ವಿಚಾರವಾಗಿ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಸಿಎಂ ಅಮೆರಿಕಕ್ಕೆ ಹೋಗಿರುವಾಗಲೇ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಮೂಲಕ ಕಾಂಗ್ರೆಸ್ ಸಂಖ್ಯಾಬಲ 78ಕ್ಕೆ ಕುಸಿದಿದೆ. ಆದರೆ ರಾಜೀನಾಮೆ ಇದು ನಿಜವಾದ ಕಾರಣ ಅಲ್ಲ ಎಂದು ಹೇಳಲಾಗುತ್ತಿದೆ.
ನಿಜವಾದ ಕಾರಣ ಏನು?
ವಿಶ್ವಾಸಮತ ಯಾಚನೆ ವೇಳೆ ಆನಂದ್ ಸಿಂಗ್ ಅವರಿಗೆ ಸಚಿವ ಸ್ಥಾನದ ಆಮಿಷವನ್ನು ನೀಡಲಾಗಿತ್ತು. ವಿಶ್ವಾಸಮತ ಯಾಚನೆ ದಿನ ಆನಂದ್ ಸಿಂಗ್ ತಡವಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಸಚಿವ ಡಿಕೆ ಶಿವಕುಮಾರ್ ಅವರು ಆನಂದ್ ಸಿಂಗ್ ಅವರನ್ನು ಕರೆದುಕೊಂಡು ಬಂದಾಗ ಸಚಿವ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ ಸಂಪುಟ ರಚಿಸುವಾದ ಆನಂದ್ ಸಿಂಗ್ ಅವರಿಗೆ ಯಾವುದೇ ಸ್ಥಾನವನ್ನು ನೀಡಿರಲಿಲ್ಲ. ಈ ಕಾರಣಕ್ಕಾಗಿ ಅವರು ತನಗೆ ಮೋಸವಾಗಿದೆ ಎಂದು ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದರು.
ಗಣೇಶ್ ಪರ ಡಿಕೆಶಿ ಬ್ಯಾಟಿಂಗ್:
ಈಗಲ್ಟನ್ ರೆಸಾರ್ಟಿನಲ್ಲಿ ಗಣೇಶ್ ಹಲ್ಲೆ ನಡೆಸಿದ್ದರೂ ಡಿಕೆಶಿ ಸಮರ್ಥಿಸಿಕೊಂಡಿದ್ದರು. ಆನಂದ್ ಸಿಂಗ್ ಕುಟುಂಬಸ್ಥರು ಗಣೇಶ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು ಗಣೇಶ್ ಬಂಧನ ತಡವಾಗಿತ್ತು. ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದ್ದರೂ ಗಣೇಶ್ ಪರವೇ ಕಾಂಗ್ರೆಸ್ ನಾಯಕರು ನಿಂತಿದ್ದ ವಿಚಾರಕ್ಕೆ ಆನಂದ್ ಸಿಂಗ್ ಬೇಸರಗೊಂಡಿದ್ದರು ಎನ್ನಲಾಗಿದೆ.