ಪಾಂಡವಪುರದಲ್ಲಿ ಬೇಬಿಬೆಟ್ಟ ಜಾತ್ರಾ ಮಹೋತ್ಸವದಲ್ಲಿ ಇಂದು (ಮಾ.2) ನಡೆದ ಸರಳ ಸಾಮೂಹಿಕ ವಿವಾಹದಲ್ಲಿ 24 ಮಂದಿ ನವ ವಧು-ವರರು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನವಜೋಡಿಗೆ ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಮಾಂಗಲ್ಯ ನೀಡಿ ಶುಭಕೋರಿದರು. ಇದನ್ನೂ ಓದಿ:ಶಿವಸೈನ್ಯಕ್ಕೆ ಗುಡ್ ನ್ಯೂಸ್- ನಾಳೆಯಿಂದ ಶಿವಣ್ಣನ ‘131’ನೇ ಸಿನಿಮಾದ ಶೂಟಿಂಗ್ ಪ್ರಾರಂಭ
Advertisement
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಪ್ರತಿ ವರ್ಷ ರಾಸುಗಳ ಜಾತ್ರೆ ವೇಳೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತದೆ. ಅದರಂತೆ ಈ ವರ್ಷವೂ ಸಾಮೂಹಿಕ ವಿವಾಹ ನಡೆಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮಾಂಗಲ್ಯ ವಿತರಣೆ ಮಾಡಿದರು. ನಟ ಧನ್ವೀರ್ ಅವರು ವಾಚ್ ವಿತರಣೆ ಮಾಡಿದರೆ, ಹಾಸ್ಯನಟ ಚಿಕ್ಕಣ್ಣ ಅವರು ಸೀರೆ, ಪಂಚೆ-ಶರ್ಟ್ ವಿತರಣೆ ಮಾಡಿದರು.
Advertisement
Advertisement
ಶ್ರೀರಾಮಾಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸಮ್ಮುಖದಲ್ಲಿ ಬೆಳಗ್ಗೆ 10:10ರ ಶುಭಲಗ್ನದಲ್ಲಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾಂಗಲ್ಯಧಾರಣೆಯಾಗುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ನೂರಾರು ಸಂಖ್ಯೆಯ ಸಾರ್ವಜನಿಕರು ಅಕ್ಷತೆ ಹಾಕುವ ಮೂಲಕ ವಧು-ವರರಿಗೆ ಆಶೀರ್ವಾದಿಸಿದರು.
Advertisement
ವಿಜಯಲಕ್ಷ್ಮಿದರ್ಶನ್ ಮಾತನಾಡಿ, ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟುತ್ತಿರುವುದು ಒಳ್ಳೆಯ ನಿರ್ಧಾರ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಜೀವನ ಸುಖ, ನೆಮ್ಮದಿ ದೊರಕಲಿ, ರೈತರು ಮತ್ತು ರೈತರ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಆಡಂಬರದ ಮದುವೆ, ಆರೋಗ್ಯ ಹಾಗೂ ಶಿಕ್ಷಣದಿಂದಾಗಿ ಜನರು ಹೆಚ್ಚಾಗಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹಾಗಾಗಿ ಹೆಚ್ಚಾಗಿ ಸರಳ ಮದುವೆಗೆ ಆಧ್ಯತೆ ನೀಡಬೇಕು. ಸರಳ ಮದುವೆ ಆಗುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿದೆ ಎಂದು ಹೇಳಿದರು. ಜನರು ಆಡಂಬರದ ಮದುವೆ ಕಠಿವಾಣ ಹಾಕಬೇಕು. ಸರಳ ಮದುವೆಯಾದರೆ ಸಮಾಜದಲ್ಲಿ ನಮ್ಮ ಬಗ್ಗೆ ಕೀಳಿರಿಮೆ ಭಾವನೆ ಮೂಡಲಿದೆ ಎಂಬ ಭಾವನೆ ಕೆಲವರಲ್ಲಿದೆ. ಇಂತಹ ಕೀಳಿರಿಮೆ ಭಾವನೆ ತೆಗೆದುಹಾಕಬೇಕು. ಸರಳ ಸಾಮೂಹಿಕ ವಿವಾಹಕ್ಕೆ ವಧು-ವರರಿಗೆ ಮಾಂಗಲ್ಯ, ವಾಚು, ಬಟ್ಟೆ ವಿತರಣೆಯ ಸಂಪೂರ್ಣವಾದ ಜವಾಬ್ದಾರಿಯನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಂದ ನಡೆಸಿ ಕೊಟ್ಟಿದ್ದಾರೆ. ಬೇಬಿಬೆಟ್ಟದ ಜಾತ್ರೆಯ ಪ್ರತಿವರ್ಷವು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು ಮುಂದಿನ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕಣ್ಣ ಮಾತನಾಡಿ, ಆಡಂಬರದ ಮದುವೆಗಳ ಮೂಲಕ ದುಂದು ವೆಚ್ಚ ಮಾಡುವುದಕ್ಕಿಂತ ಸರಳ ಮದುವೆ ಮಾಡಿಕೊಳ್ಳುವುದು ಒಳ್ಳೆಯದು. ಮದುವೆ ಮಾಡಿಕೊಳ್ಳುವುದು ಮುಖ್ಯವಲ್ಲ ಜೀವನದಲ್ಲಿ ಸಂಸಾರವನ್ನು ನೆಮ್ಮದಿಯಿಂದ ನಡೆಸಿಕೊಂಡು ಹೋಗುವುದು ಮುಖ್ಯವಾಗಿದೆ. ನಾವು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ದರ್ಶನ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾರಣ. ನಟ ದರ್ಶನ್ ಅವರು ಕಳೆದ ವರ್ಷ ಭಾಗವಹಿಸಿ ಮುಂದಿನ ವರ್ಷವು ಬರುವುದಾಗಿ ಹೇಳಿದ್ದರು. ಆದರೆ ಅವರು ಬರಲು ಸಾಧ್ಯವಾಗದ ಕಾರಣ ಅವರ ಪತ್ನಿ ವಿಜಯಲಕ್ಷ್ಮಿ ಅವರು ಭಾಗವಹಿಸಿ ವಧು-ವರರಿಗೆ ಮಾಂಗಲ್ಯ ವಿತರಣೆ ಮಾಡಿದ್ದಾರೆ. ಮುಂದೆ ಎಲ್ಲರ ಜೀವನದಲ್ಲಿ ಒಳ್ಳೆಯದಾಗಲಿ ಎಂದು ತಿಳಿಸಿದರು.