ಇಂದು ಸಂಜೆ ಪ್ರಸಾರವಾಗಬೇಕಿದ್ದ ವಾರದ ಕಥೆ ಕಿಚ್ಚನ ಜೊತೆ ಮತ್ತು ಕಿಚ್ಚನ ಪಂಚಾಯಿತಿ ಪ್ರಸಾರವಾಗುವುದಿಲ್ಲ. ಕಾರಣ ಸುದೀಪ್ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇಂದು ಮತ್ತು ನಾಳೆ ನಡೆಯುತ್ತಿದೆ. ಇಂದು ಅದ್ಧೂರಿಯಾಗಿ ಪಂದ್ಯಕ್ಕೆ ಚಾಲನೆ ಸಿಗಲಿದೆ. ಹೀಗಾಗಿ ಸುದೀಪ್ (sudeep) ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ.
ಹಾಗಂತ ಇಂದಿನ ಕಾರ್ಯಕ್ರಮವನ್ನು ನೆನಪಿಸುವಂತಹ ಮತ್ತೊಂದು ಏರ್ಪಾಟನ್ನು ಮಾಡಿಕೊಂಡಿದೆ ಬಿಗ್ ಬಾಸ್ (Bigg Boss Kannada) ಟೀಮ್. ಇಂದು ಮನೆಯೊಳಗೆ ಹಿರಿಯ ನಟಿ, ಬಿಗ್ ಬಾಸ್ ವಿನ್ನರ್ ಶ್ರುತಿ ಅವರನ್ನು ಕಳುಹಿಸಿದೆ. ಬೆಳಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಅದರಿಂದ ಶ್ರುತಿ ಅವರು ಮನೆಯೊಳಗೆ ಪ್ರವೇಶಿಸಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ. ಶ್ರುತಿ ನ್ಯಾಯಾಧೀಶರ ಕುರ್ಚಿಯಲ್ಲಿ ಕೂತಿದ್ದಾರೆ.
ಈ ನಡುವೆ ಮತ್ತೋರ್ವ ಅತಿಥಿ ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಶ್ರುತಿ ಅವರು ಮನೆಯಿಂದ ಆಚೆ ಬರುತ್ತಿದ್ದಂತೆಯೇ ನಟ, ಮಾಜಿ ಬಿಗ್ ಬಾಸ್ ಸ್ಪರ್ಧಿ ವಿಜಯ್ ರಾಘವೇಂದ್ರ (Vijaya Raghavendra) ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಾಹಿನಿಯು ಏನೂ ಹೇಳದಿದ್ದರೂ, ಇದು ಪಕ್ಕಾ ಎಂದೇ ಹೇಳಲಾಗುತ್ತಿದೆ.
ವಿಜಯ್ ಕೂಡ ಹತ್ತಾರು ರಿಯಾಲಿಟಿ ಶೋನಲ್ಲಿ ಭಾಗಿಯಾದವರು. ಈ ಹಿಂದೆ ಬಿಗ್ ಬಾಸ್ ಮನೆಯಲ್ಲೂ ಇದ್ದವರು. ಹಾಗಾಗಿ ವಿಜಯ್ ರಾಘವೇಂದ್ರ ಅವರನ್ನು ಎರಡನೇ ದಿನಕ್ಕೆ ಅತಿಥಿಯಾಗಿ ದೊಡ್ಮನೆ ಒಳಗೆ ಕಳುಹಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಈ ವಿಷಯವನ್ನು ವಾಹಿನಿಯೇ ಸ್ಪಷ್ಟಪಡಿಸಬೇಕಿದೆ.