ಬೆಂಗಳೂರು: ಟಿಪ್ಪು ಜಯಂತಿ ರದ್ದು ವಿರೋಧಿಸಿ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ ಅವರು ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.
ಕಲಾಪ ಆರಂಭಗೊಂಡ ಬಳಿಕ ಸಿಎಂ ಯಡಿಯೂರಪ್ಪ ಅವರು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರ ಚುನಾವಣೆಗೆ ಪ್ರಸ್ತಾವ ಮಂಡಿಸಿದರು. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಆದರೆ ಅದನ್ನು ಲೆಕ್ಕಿಸದೇ ಬಿ.ಎಸ್.ಯಡಿಯೂರಪ್ಪ ಪ್ರಸ್ತಾವನೆ ಓದಿದರು. ಬಳಿಕ ನಾನು ಸಿದ್ಧಾರ್ಥ್ ಅವರ ಅಂತ್ಯಕ್ರಿಯೆಗೆ ಹೋಗಬೇಕಿದೆ. ಸದನದಿಂದ ಹೊರಡುತ್ತೇನೆ ಎಂದು ಸಿಎಂ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಕೇಳಿಕೊಂಡರು.
ಬಿಎಸ್ ಯಡಿಯೂರಪ್ಪ ಅವರನ್ನು ಎದ್ದು ಹೋಗಲು ಬಿಡದ ಮಾಜಿ ಸಿಎಂ, ನಾನು ಮಾತನಾಡೋ ತನಕ ಹೋಗಬೇಡಿ. ಐದು ನಿಮಿಷ ಕುಳಿತುಕೊಳ್ಳಿ ಆಮೇಲೆ ಎದ್ದು ಹೋಗಿ ಎಂದು ಪಟ್ಟು ಹಿಡಿದರು. ಈ ವೇಳೆ ಬಿಜೆಪಿ ಸರ್ಕಾರದಿಂದ ಟಿಪ್ಪು ಜಯಂತಿ ರದ್ದು ವಿಚಾರವಾಗಿ ಸದನದಲ್ಲಿ ಗಲಾಟೆ ಆರಂಭವಾಯಿತು. ಮಾಜಿ ಸಿಎಂ ಮಾತು ಆರಂಭಿಸುತ್ತಿದ್ದಂತೆ ಸಿಎಂ ಯಡಿಯೂರಪ್ಪ ಅವರು ಸದನದಿಂದ ಹೊರ ನಡೆದರು.
ಟಿಪ್ಪು ಜಯಂತಿ ರದ್ದು ವಿಚಾರವಾಗಿ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ಹಾಗೂ ವಿರೋಧದ ಮಧ್ಯೆಯೇ ಸಿಎಂ ಕಲಾಪದಿಂದ ಹೊರ ನಡೆದರು. ಈ ಮೂಲಕ ಉದ್ಯಮಿ ಸಿದ್ಧಾರ್ಥ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಚಿಕ್ಕಮಗಳೂರಿಗೆ ಹೊರಟರು. ಸಿಎಂ ಏಕಾಏಕಿ ಹೊರ ನಡೆದಿದ್ದರಿಂದ ಸದನದಲ್ಲಿ ಗದ್ದಲ ಆರಂಭವಾಯಿತು. ಆಗ ಸ್ಪೀಕರ್ ಅವರು ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದರು.