ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಬಿಡುಗಡೆ ಕುರಿತು ಸದನದಲ್ಲಿ ಗಂಭಿರ ಚರ್ಚೆ ನಡೆಯುತ್ತಿದ್ದಾಗ ಲೋಕೋಪಯೋಗಿ ಸಚಿವ ರೇವಣ್ಣ ಅವರು ಆಡಿದ ಕೆಲ ಮಾತುಗಳು ಸದನದಲ್ಲಿ ನಗುವಿನ ಅಲೆಯನ್ನು ಸೃಷ್ಟಿಸಿತ್ತು.
ಆಡಿಯೋ ತನಿಖೆಯನ್ನ ಎಸ್ಐಟಿಗೆ ವಹಿಸಬೇಕು ಎಂಬ ಚರ್ಚೆ ಕುರಿತಂತೆ ರೇವಣ್ಣ ಅವರು ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು. ಆದರೆ ಈ ವೇಳೆ ರೇವಣ್ಣರನ್ನು ಕಾಲೆಳೆದ ಸ್ಪೀಕರ್ ಅವರು, ರೇವಣ್ಣ ಅವರು ಈಗ ಮಾತನಾಡುತ್ತಾರೆ. 1 ನಿಮಿಷ ಲೇಟಾದರೆ ಅವರು ಮಾತಾಡಲ್ಲ ಎಂದು ಸ್ಪೀಕರ್ ಹೇಳಿದರು.
ಈ ವೇಳೆ ಶಾಸಕ ಸಿಟಿ ರವಿ ಮಾತನಾಡಲು ಯತ್ನಿಸಿದರು. ಇದಕ್ಕೆ ರೇವಣ್ಣ ಅಡ್ಡಿಪಡಿಸಿ `ಏಯ್ ಕೂತ್ಕಳಪ್ಪಾ’ ಎಂದರು. ಇದಕ್ಕೆ ಗರಂ ಆದ ಸಿಟಿ ರವಿ ಅವರು, ನಾನೇನು ನಿಮ್ಮ ಮನೆ ಆಳಲ್ಲ ಎಂದು ಸಿಟ್ಟಾದರು. ಅಲ್ಲದೇ ನಾವು ಮೂರು ತಿಂಗಳು ಸುಮ್ಮನಿದ್ದಿದ್ದರೆ ಇದ್ಯಾವುದು ಬರುತ್ತಿರಲಿಲ್ಲ ಎಂದರು. ಈ ಮಾತು ಹೇಳುತ್ತಿದಂತೆ ಚಾಟಿ ಬೀಸಿದ ಸ್ಪೀಕರ್, ಹಾಗಾದರೆ ಏಕೆ ಆತುರ ಪಟ್ಟಿದ್ದೀರಾ ಎಂದರು.
ಬಳಿಕ ಮಾತನಾಡಿದ ರೇವಣ್ಣ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಈ ಬಾರಿ ಸಿಎಂ ಬಜೆಟ್ ಮಂಡಿಸಲ್ಲ ಎಂದು ಆರ್ ಅಶೋಕ್ ಹೇಳಿದ್ದರು. ಆದರೆ ಬಜೆಟ್ಗೆ ಮುಹೂರ್ತ ಇಟ್ಟಿದ್ದು ನಾನು. ತಮಿಳುನಾಡು ಜ್ಯೋತಿಷ್ಯ ನೋಡಿ ಮುಹೂರ್ತ ಇಟ್ಟಿದ್ದೇನೆ. ತಪ್ಪೋಕೆ ಸಾಧ್ಯವೇ ಇಲ್ಲ ಎಂದರು. ರೇವಣ್ಣ ಮಾತಿಗೆ ಸದನದಲ್ಲಿ ನಗೆ ಉಕ್ಕಿತು. ಅಂತಿಮವಾಗಿ ಸ್ಪೀಕರ್ ನಿರ್ಧಾರವನ್ನು ಮುಖ್ಯಮಂತ್ರಿಗಳು ಜಾರಿಗೆ ತರುತ್ತಾರೆ ಎಂದು ಹೇಳಿ ತಮ್ಮ ಮಾತನ್ನು ಪೂರ್ಣಗೊಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv