ಬೆಂಗಳೂರು: ವಿಧಾನ ಮಂಡಲದ ಅಧಿವೇಶನದಲ್ಲಿ ಐತಿಹಾಸಿವಾಗಿ ಸಂವಿಧಾನ ಮೇಲೆ ಚರ್ಚೆ ನಡೆಯುತ್ತಿದೆ. ಪ್ರತಿಯೊಬ್ಬ ಶಾಸಕರು ಸಂವಿಧಾನದ ಮೇಲೆ ಅರ್ಥ ಗರ್ಭೀತವಾಗಿ ಚರ್ಚೆ ಮಾಡುತ್ತಿದ್ದಾರೆ. ಸಂವಿಧಾನದ ಚರ್ಚೆಯಲ್ಲಿ ಹೊಸ ಹೊಸ ಇತಿಹಾಸದ ವಿಷಯಗಳ ಬೆಳಕಿಗೆ ಬರುತ್ತಿವೆ. ಇವತ್ತು ಕೂಡ ವಿಧಾನ ಪರಿಷತ್ನಲ್ಲಿ ನಡೆದ ಸಂವಿಧಾನದ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ರವಿ ಅವರು ಸಂವಿಧಾನ ರಚನೆಯ ಕುತೂಹಲಕಾರಿ ಅಂಶಗಳನ್ನು ಸದನಕ್ಕೆ ತಿಳಿಸಿದರು.
ಭಾರತದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಯಾರು ಮರೆಯುವಂತಹದ್ದಲ್ಲ. ಸಂವಿಧಾನ ಶಿಲ್ಪ ಅಂಬೇಡ್ಕರ್ ಭಾರತ ಸಂವಿಧಾನದ ಜೀವಾಳ ಇದ್ದಂತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದರ ಜೊತೆ ಜೊತೆಗೆ ಈ ಸಂವಿಧಾನವನ್ನು ತಮ್ಮ ಸುಂದರವಾದ ಕೈಬರಹದ ಮೂಲಕ ಬರೆದವರ ಕುತೂಹಲಕಾರಿ ಅಂಶವನ್ನು ಸದಸ್ಯ ರವಿ ಬಿಚ್ಚಿಟ್ಟರು.
479 ಪುಟಗಳ ಭಾರತ ಸಂವಿಧಾನವನ್ನು ತಮ್ಮ ಸುಂದರವಾದ ಕೈಬರಹದಿಂದ ಬರೆದವರು ಪ್ರೇಮ್ ಬಿಹಾರಿ ನಾರಾಯಣ ರಾಯ್ಜಾದಾ. ದೆಹಲಿಯ ಸೆಂಟ್ ಸ್ಟೀಫನ್ ಸನ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಅವರ ಸುಂದರ ಬರಹವನ್ನು ಮೆಚ್ಚಿದ್ದ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರೇ ಸಂವಿಧಾನವನ್ನು ಬರೆದು ಕೊಡುವಂತೆ ಪ್ರೇಮ್ ಬಿಹಾರಿ ಅವರಿಗೆ ಮನವಿ ಮಾಡಿದ್ದರು. ನೆಹರು ಮನವಿಗೆ ಒಪ್ಪಿದ ಪ್ರೇಮ್ ಬಿಹಾರಿ ಅವರು ಸಂವಿಧಾನ ಬರೆದುಕೊಡಲು ಒಪ್ಪಿದರು.
ಕೈ ಬರಹದ ಮೂಲಕ ಪ್ರೇಮ್ ಬಿಹಾರಿ ನಾರಾಯಣ ರಾಯ್ಜಾದಾ ಸಂವಿಧಾನ ಬರೆಯಲು ಸುಮಾರು 6 ತಿಂಗಳು ಸಮಯ ತೆಗೆದುಕೊಂಡರಂತೆ. ಈ ಸಂವಿಧಾನ ಬರೆಯಲು ಸುಮಾರು 254 ಪೆನ್ ನಿಬ್ಬುಗಳನ್ನ ಬಳಸಲಾಗಿದೆ ಅಂತೆ. ವಿಶೇಷ ಅಂದ್ರೆ ಸಂವಿಧಾನವನ್ನ ಕೈಬರಹದ ಮೂಲಕ ಬರೆದುಕೊಡಲು ಪ್ರೇಮ್ ಬಿಹಾರಿ ಅವರು ಯಾವುದೇ ಸಂಭಾವನೆ ಪಡೆದಿಲ್ಲ. ಗೌರವ ಧನ ಸ್ವೀಕಾರ ಮಾಡುವಂತೆ ನೆಹರು ಅವರು ಕೇಳಿದರೂ ಅದಕ್ಕೆ ಪ್ರೇಮ್ ಬಿಹಾರಿ ಬೇಡ ಅಂತ ನಿರಾಕರಿಸಿದ್ದರಂತೆ.
ಗೌರವ ಧನದ ಬದಲಾಗಿ ಸಂವಿಧಾನದ ಪ್ರತಿ ಪುಟದ ಅಂತ್ಯದಲ್ಲಿ ತಮ್ಮ ಹೆಸರನ್ನು ಹಾಗೂ ಕೊನೆಯ ಪುಟದಲ್ಲಿ ತಮ್ಮ ಹೆಸರು ಜೊತೆ ತಮ್ಮ ತಾತನ ಹೆಸರು ಬರೆಯಲು ಅನುಮತಿ ಕೊಡಿ ಅಂತ ನೆಹರು ಬಳಿ ಕೇಳಿದ್ದರು. ನೆಹರು ಅವರು ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಂತೆ.
ಇನ್ನೊಂದು ಇಂಟ್ರಸ್ಟಿಂಗ್ ವಿಷಯ ಅಂದ್ರೆ ಸಂವಿಧಾನಕ್ಕೆ ಸುಂದರ ಕಲೆ ಸ್ಪರ್ಶ ನೀಡಿದವರು ನಂದಲಾಲ್ ಬೋಸ್ ಅವರು. ರವೀಂದ್ರನಾಥ ಠಾಗೂರ್ ಅವರಿಂದ ಪ್ರೇರಣೆ ಪಡೆದಿದ್ದ ನಂದಲಾಲ್ ಅವರು ಶಾಂತಿನಿಕೇತನದ ಪ್ರಾಂಶುಪಾಲರಾಗಿದ್ದರು. ದೇಶದ ಮಹಾನ್ ಕಲಾವಿದರಲ್ಲಿ ಒಬ್ಬರಾದ ನಂದಲಾಲ್ ಅವರು ತಮ್ಮ ಶಿಷ್ಯರನ್ನ ಒಳಗೂಡಿ ಸಂವಿಧಾನಕ್ಕೆ ಚಿತ್ತಾರ ಮಾಡಿದ್ದರಂತೆ.