ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನು 10 ತಿಂಗಳಷ್ಟೇ ಬಾಕಿ ಇರುವಂತೆ ಪರಿಷತ್ ಸಭಾಪತಿ ಬಿಜೆಪಿಯ ಡಿಹೆಚ್ ಶಂಕರಮೂರ್ತಿಯವರನ್ನು ಕೆಳಗಿಳಿಸುವ ಕಾಂಗ್ರೆಸ್ ತಂತ್ರ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಸಭಾಪತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೆಡಿಎಸ್ ಮೇಲ್ಮನೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಸಬೇಕೇ ಅಥವಾ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಬೇಕೇ ಅನ್ನೋ ಗೊಂದಲದಲ್ಲಿದೆ.
ಸಭಾಪತಿ ಚುನಾವಣೆ ಸಂಬಂಧ ಪರಿಷತ್ ಸದಸ್ಯರ ಜೊತೆಗೆ ತಡರಾತ್ರಿ ಸಭೆ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ನಂತರ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದರು. ದೇವೇಗೌಡರು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಒಲುವು ತೋರಿದ್ದರೆ ಕುಮಾರಸ್ವಾಮಿ ಮನಸ್ಸು ಬಿಜೆಪಿಯತ್ತ ವಾಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ದೇವೇಗೌಡರ ವಿವೇಚನೆಗೆ ಬಿಡಲಾಗಿದೆ.
ಸಭಾಪತಿ ಸ್ಥಾನ ಬಿಟ್ಟುಕೊಡುವ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಜೆಡಿಎಸ್ ಯೋಚಿಸುತ್ತಿದೆ. ಮಂಗಳವಾರದಂದು ಕೆಪಿಸಿಸಿ ಅಧ್ಯಕ್ಷ ಗೃಹ ಸಚಿವ ಪರಮೇಶ್ವರ್ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಪಾಲಿಕೆಯಲ್ಲಿನ ಮೈತ್ರಿಯಂತೆ ಪರಿಷತ್ನಲ್ಲೂ ಕೈ ಜೋಡಿಸೋಣ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪರಮೇಶ್ವರ್. ಇತ್ತ ಕುಮಾರಸ್ವಾಮಿ ಜೊತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ನ ಸಂಖ್ಯಾಬಲದ ಡಿಟೇಲ್ಸ್ ಹೀಗಿದೆ:
* ಒಟ್ಟು ಸದಸ್ಯರ ಸಂಖ್ಯೆ -75
* ಪ್ರಸ್ತುತ ಸದಸ್ಯರ ಸಂಖ್ಯೆ – 74 (ವಿಮಲಾ ಗೌಡ ನಿಧನದಿಂದ 1 ಸ್ಥಾನ ಖಾಲಿ)
* ಬಹುಮತಕ್ಕೆ- 38
* ಕಾಂಗ್ರೆಸ್ – 33
* ಜೆಡಿಎಸ್ – 13
* ಬಿಜೆಪಿ – 22
* ಪಕ್ಷೇತರ – 05
* ಸಭಾಪತಿ – 01
ಪರಿಷತ್ ನಲ್ಲಿ ಒಟ್ಟಾರೆ 75 ಸದಸ್ಯರು ಇದ್ದಾರೆ. ಇತ್ತೀಚೆಗೆ ನಿಧನರಾದ ಬಿಜೆಪಿಯ ವಿಮಲಗೌಡರ ಸ್ಥಾನ ಹೊರತುಪಡಿಸಿದ್ರೆ ಒಟ್ಟಾರೆ ಸದನದಲ್ಲಿ ಸದ್ಯ ಸಂಖ್ಯಾಬಲ 74 ಆಗಲಿದೆ. ಇದರ ಅನ್ವಯ ಸರಳ ಬಹುಮತಕ್ಕೆ 38 ಸ್ಥಾನಗಳು ಅವಶ್ಯಕವಾಗಿದೆ.
ಸಂಖ್ಯಾಬಲದ ಪ್ರಕಾರ ಪೂರ್ಣ ಬಹುಮತ ಪಡೆಯಲು ಕಾಂಗ್ರೆಸ್ಗೆ 2 ಸ್ಥಾನಗಳ ಕೊರತೆಯಿದೆ. ಸದ್ಯ ಸದನದಲ್ಲಿ ಕಾಂಗ್ರೆಸ್ 33, ಬಿಜೆಪಿ 22, ಜೆಡಿಎಸ್ 13, ಪಕ್ಷೇತರರು 5 ಸ್ಥಾನಗಳಿವೆ. ಸಭಾಪತಿಗಳ ಒಂದು ಸ್ಥಾನ ಇದೆ. ಕಾಂಗ್ರೆಸ್ ಜೊತೆ ಪಕ್ಷೇತರ ಮೂರು ಸದಸ್ಯರು ಗುರುತಿಸಿಕೊಂಡಿದ್ದು 33 ಕಾಂಗ್ರೆಸ್ ಸದಸ್ಯರ ಜೊತೆ 3 ಪಕ್ಷೇತರರು ಸೇರಿದ್ರೆ ಒಟ್ಟು 36 ಸ್ಥಾನವಾಗಲಿದೆ.
ಬಿಜೆಪಿ-ಜೆಡಿಎಸ್ ದೋಸ್ತಿ ಮುಂದುವರೆಸಿದ್ರೆ ಸರಳ ಬಹುಮತದೊಂದಿಗೆ ಹಾಲಿ ಸಭಾಪತಿಗಳೇ ಮುಂದುವರೆಯುತ್ತಾರೆ. ಇಬ್ಬರು ಪಕ್ಷೇತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಬಿಜೆಪಿ 33 + ಜೆಡಿಎಸ್ 13 ಸೇರಿ ಒಟ್ಟು 37 ಸ್ಥಾನವಾಗಲಿದೆ. ಸಭಾಪತಿಗಳು ಬಿಜೆಪಿಯವರಾಗಿರೋದ್ರೀಂದ ಅವರ ಮತ ಬಿಜೆಪಿಗೆ ಸಿಗಲಿದ್ದು ಒಟ್ಟಾರೆ 38 ಸ್ಥಾನಗಳ ಮೂಲಕ ಬಿಜೆಪಿಗೆ ಸಭಾಪತಿ ಸ್ಥಾನ ದೊರೆಯಬಹುದಾಗಿದೆ.