ಬಾಗಲಕೋಟೆ: ವೈದ್ಯಕೀಯ ಪರೀಕ್ಷೆಗೆ ಎಂದು ಕರೆತಂದ ಆರೋಪಿ ಓರ್ವ ಪೊಲೀಸರಿಂದ ತಪ್ಪಿಸಿಕೊಂಡು ಸಿನಿಮೀಯ ರೀತಿಯಲ್ಲಿ ಓಡಿಹೋದ ಘಟನೆ ಮಾರ್ಚ್ 9ರ ರಾತ್ರಿ 9.15ಕ್ಕೆ ಬಾಗಲಕೋಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಿಲೀಪ್ ರಾಟೋಡ್ ಮತ್ತು ಕೃಷ್ಣಾ ಇಬ್ಬರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಮೊದಲು ಪೊಲೀಸರೊಂದಿಗೆ ಇಬ್ಬರು ಸುಮ್ಮನೆ ಬರುತ್ತಾರೆ. ಪರೀಕ್ಷೆ ಬಳಿಕ ಇಬ್ಬರು ಆಸ್ಪತ್ರೆಯಿಂದ ಓಡುತ್ತಾರೆ. ಅದರಲ್ಲಿ ಕೃಷ್ಣನನ್ನ ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಮಾತ್ರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.
ಪೊಲೀಸರೊಂದಿಗೆ ಶಾಂತವಾಗಿ ಬರುತ್ತಿದ್ದ ದಿಲೀಪ್ ಒಮ್ಮಿಂದೊಮ್ಮೆಲೆ ಓಡಲು ಶುರು ಮಾಡುತ್ತಾನೆ. ಆತನ ಹಿಂದೆ ಪೊಲೀಸರು ಬೆನ್ನಟ್ಟುತ್ತಾರೆ. ಆದರೆ ದಿಲೀಪ್ ಮಾತ್ರ ಪೊಲೀಸರ ಕೈಗೆ ಸಿಗದೇ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.
ಜಿಲ್ಲಾಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ದಿಲೀಪ್ ರಾಟೋಡ್, ಕೃಷ್ಣಾ ರಾಟೋಡ್ ಮುಚಕಂಡಿ ತಾಂಡಾ ನಿವಾಸಿಗಳಾಗಿದ್ದಾರೆ. ಹೋಳಿ ಹಬ್ಬದ ಸಂದರ್ಭ ಬಾಗಲಕೋಟೆಯ ಹರನಶಿಕಾರಿಗಲ್ಲಿ ಯುವಕರು ಮತ್ತು ದಿಲೀಪ್ ರಾಟೋಡ್, ಕೃಷ್ಣಾ ರಾಟೋಡ್ ಹೊಡೆದಾಡಿದ್ದರು.
ಎರಡು ಕಡೆಯಿಂದ ಬಾಗಲಕೋಟೆ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿವೆ. ಪೊಲೀಸ್ ಕಸ್ಟಡಿ ವೇಳೆ ವೈದ್ಯಕೀಯ ಪರೀಕ್ಷೆಗೆ ಎಂದು ಕರೆತಂದಾಗ ದಿಲೀಪ್ ಓಡಿ ಹೋಗಿದ್ದು, ಬಾಗಲಕೋಟೆ ನಗರ ಠಾಣಾ ಪೊಲೀಸರು ಶೋಧ ನಡೆಸಿದ್ದಾರೆ.
https://www.youtube.com/watch?v=Z1woh9XyXz8