ಹಾಸನ: ಕಾಫಿ ತೋಟವೊಂದರಲ್ಲಿ ಕೆರೆಹಾವನ್ನು ನುಂಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಉರಗಪ್ರೇಮಿ ಸಗೀರ್ ಈ ಹಾವನ್ನು ಹಿಡಿದಿದ್ದಾರೆ.
ಕ್ಯಾನಹಳ್ಳಿ ಗ್ರಾಮದ ಸುಧೀರ್ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕರು ಶನಿವಾರ ಕೆಲಸ ಮಾಡುತ್ತಿದ್ದ ವೇಳೆ ಈ ಹಾವು ಕಂಡುಬಂದಿದೆ. ಭಾರೀ ಗಾತ್ರದ ಕಾಳಿಂಗ ಸರ್ಪ ಕಾಫಿ ಗಿಡದ ಅಡಿಯಲ್ಲಿ ಮಲಗಿಕೊಂಡಿದ್ದನ್ನು ನೋಡಿ ಭಯಭೀತರಾಗಿ ತೋಟದ ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಮಾಲೀಕ ಉರಗತಜ್ಞರಿಗೆ ಕರೆ ಮಾಡಿದ್ದಾರೆ. ಅಂತೆಯೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಗೀರ್ರವರು ಕಾಳಿಂಗಸರ್ಪ ಇದ್ದ ಜಾಗದಲ್ಲಿ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ತಲೆದಿಂಬಿನ ಕವರ್ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ
ಸುಮಾರು 8 ಅಡಿಯಷ್ಟು ಉದ್ದವಿದ್ದ ಈ ಹಾವು ಕೇರೆ ಹಾವೊಂದನ್ನು ನುಂಗಿತ್ತು. ಸರ್ಪ ಸೆರೆ ಸಿಕ್ಕ ನಂತರ ತನ್ನ ಹೊಟ್ಟೆಯಲ್ಲಿದ್ದ ಕೇರೆ ಹಾವನ್ನು ಹೊರ ಹಾಕಿತು. ಬಳಿಕ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದ್ದು, ಸದ್ಯ ಸರ್ಪವನ್ನು ಕೆಂಪುಹೊಳೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ಹಾವನ್ನು ಹಿಡಿದ ಸಗೀರ್ ಕಾರ್ಯಕ್ಕೆ ಅರಣ್ಯ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ. ಈವರೆಗೆ ಸ್ನೇಕ್ ಸಗೀರ್ ಸುಮಾರು 3700 ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕಾರ್ಯವನ್ನು ಮಾಡಿದ್ದಾರೆ.
https://www.youtube.com/watch?v=MhdtBr9LkfU&feature=youtu.be