ನವದೆಹಲಿ: ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶ (ಸಿಜೆಐ) ದೀಪಕ್ ಮಿಶ್ರಾ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ್ದ ಮಹಾಭಿಯೋಗ ನಿಲುವಳಿ ನೋಟಿಸ್ ಅನ್ನು ರಾಜ್ಯಸಭಾ ಸ್ಪೀಕರ್ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದಾರೆ.
ನೋಟಿಸ್ ನಲ್ಲಿ ಹೇಳಲಾದ ಯಾವುದೇ ಅಂಶಗಳಿಗೆ ಸೂಕ್ತ ಸಾಕ್ಷಿಗಳಾಗಲಿ, ಆಧಾರಗಳಾಗಲಿ ಇಲ್ಲ. ಕಾನೂನು ಮತ್ತು ಸಂವಿಧಾನ ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ನಿಲುವಳಿ ನೋಟಿಸ್ ಸ್ವೀಕರಿಸಲು ಅನರ್ಹವಾಗಿದೆ. ಹಾಗಾಗಿ ನಿರಾಕರಿಸಿದ್ದೇನೆ ಎಂದು ಹೇಳಿದ್ದಾರೆ.
ಮಹಾಭಿಯೋಗ ನಿಲುವಳಿ ನೋಟಿಸ್ ನಲ್ಲಿ ಮಾಡಿರುವ 5 ಆರೋಪಗಳು ಹಾಗೂ ಅದಕ್ಕೆ ಒದಗಿಸಿರುವ ದಾಖಲಾತಿಗಳನ್ನು ಪರಿಶೀಲಿಸಿದ್ದೇನೆ. ಎಲ್ಲೂ ಕೂಡ ಸಿಜೆಐ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಕಂಡು ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗಕ್ಕೆ ಮನಮೋಹನ್ ಸಿಂಗ್ ಸಹಿ ಮಾಡಿಲ್ಲ ಏಕೆ?
ಒಂದು ವೇಳೆ ನಿಲುವಳಿ ನೋಟಿಸ್ ನಿರಾಕರಿಸಿದ್ದೇ ಆದಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು. ರಾಜ್ಯಸಭಾಧ್ಯಕ್ಷರ ನಿರಾಕರಣೆಯ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ನಡೆಯನ್ನು ನಿರ್ಧಾರ ಮಾಡುತ್ತೇವೆ ಎಂದು ಕಾಂಗ್ರೆಸ್ ಸದಸ್ಯ ಪಿ ಎಲ್ ಪುನಿಯಾ ಹೇಳಿದ್ದಾರೆ.ಇದನ್ನೂ ಓದಿ:ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆಯುವುದು ಹೇಗೆ?
ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಹಿರಿಯ ಕಾನೂನು ತಜ್ಞ ಕೆ ಪರಾಶರನ್, ಮಾಜಿ ಸಿಜೆಐ ಬಿ ಸುದರ್ಶನ್ ರೆಡ್ಡಿ ಅವರ ಜೊತೆ ಕೂಡ ವೆಂಕಯ್ಯ ನಾಯ್ಡು ಈ ವಿಚಾರದ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.