ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಸಾರ್ವಜನಿಕವಾಗಿ ಥಳಿಸಿದರೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ `ಹಿಂದೂ ಹೀ ಆಗೇ’ ಸಂಘಟನೆ ಘೋಷಿಸಿದೆ.
ಸಲ್ಮಾನ್ ಖಾನ್ ಅವರ ಸಿನಿಮಾ ನಿರ್ಮಾಣ ಸಂಸ್ಥೆ `ಲವ್ರಾತ್ರಿ’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದು, ನವರಾತ್ರಿ ವೇಳೆ ಬಿಡುಗಡೆಗೆ ಸಿದ್ಧಗೊಳಿಸಿದೆ. ಸಲ್ಮಾನ್ ಖಾನ್ ರ ಸಿನಿಮಾಗೆ `ಲವ್ರಾತ್ರಿ’ ಎಂದು ಹೆಸರಿಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಹಿಂದೂ ಪರ ಸಂಘಟನೆ ಆರೋಪಿಸಿದೆ.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮಾಜಿ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ನೂತನ ಸಂಘಟನೆ ಹಿಂದೂ ಹೀ ಆಗೇಯ ಆಗ್ರಾ ಘಟಕದ ಮುಖ್ಯಸ್ಥ ಗೋವಿಂದ್ ಪರಾಶರ್ ಈ ಘೋಷಣೆ ಮಾಡಿದ್ದಾರೆ.
ಸಲ್ಮಾನ್ ಖಾನ್ ಅವರ ಚಿತ್ರ ನಿರ್ಮಾಣ ಸಂಸ್ಥೆಯ ವಿರುದ್ಧ ಪರಾಶರ್ ಮತ್ತು ಅವರ ಸಂಘಟನೆಯ ಕಾರ್ಯಕರ್ತರು ಗುರುವಾರ ಭಗ್ವಾನ್ ಟಾಕೀಸ್ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಲ್ಮಾನ್ ಖಾನ್ ಅವರ ಪೋಸ್ಟರ್ ಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದ್ದರು. ಅಲ್ಲದೇ ಸಲ್ಮಾನ್ ರ ನಡೆಯನ್ನು ನಾವು ಖಂಡಿಸುತ್ತಿದ್ದು, ಈ ಸಿನಿಮಾವನ್ನು ನಿಷೇಧಿಸಲು ಒತ್ತಾಯಿಸುತ್ತಿದ್ದೇವೆ ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಹಿಂದೂ ಭಾವನೆಗಳಿಗೆ ಧಕ್ಕೆ ತರುವುದನ್ನು ಯಾವುದೇ ರೀತಿಯ ನಡೆಯನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಸಂಘಟನೆ ಕಾರ್ಯಕರ್ತರು, ಒಂದು ವೇಳೆ ಚಿತ್ರ ಬಿಡುಗಡೆಗೆ ಅವಕಾಶ ನೀಡಿದರೆ ನಾವು ತೀವ್ರ ರೀತಿಯಲ್ಲಿ ಪ್ರತಿಭಟಿಸುತ್ತೇವೆ ಎಂದು ಹೇಳಿದ್ದಾರೆ. ಲವ್ರಾತ್ರಿ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ಸಲ್ಮಾನ್ ಖಾನ್ ತಂಗಿಯ ಮಗ ಆಯುಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.