ಉಡುಪಿ: ಸುದ್ದಿವಾಹಿನಿಗಳ ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಘಾತದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆ ಸೇರುವ ಮೊದಲೇ ಕೊನೆಯುಸಿರೆಳೆದಿದ್ದಾರೆ. ಎದೆ ನೋವು ಬಂದ ಕೂಡಲೇ ನಗರದ ಮಿಷನ್ ಕಂಪೌಂಡ್ ನಲ್ಲಿರುವ ಲೋಂಬಾರ್ಡ್ ಆಸ್ಪತ್ರೆಗೆ ಸ್ನೇಹಿತನ ಜೊತೆ ತೆರಳಿದ್ದರು.
ವಿಪರೀತ ಎದೆನೋವು ಆದಾಗ ಕೂಡಲೇ ಆದರ್ಶ ಆಸ್ಪತ್ರೆಗೆ ಸ್ವತಃ ರವಿರಾಜ್ ಕರೆ ಮಾಡಿ ಬರುತ್ತಿರುವುದಾಗಿ ಹೇಳಿದ್ದಾರೆ. ಡಾ. ಚಂದ ಶೇಖರ್ ಅವರಿಗೆ ಕರೆ ಮಾಡಿದ ಕೂಡಲೇ ಕಾರಿನೊಳಗೆ ಕುಸಿದಿದ್ದಾರೆ. ಆಸ್ಪತ್ರೆ ಹೋಗುವ ಮೊದಲೇ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಡುಪಿಯಲ್ಲಿ ಈಟಿವಿ ವರದಿಗಾರನಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ರವಿರಾಜ್ ನಂತರ ಸುವರ್ಣ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ಬೆಳವಣಿಗೆಗಳ ಹಿರಿಯ ವರದಿಗಾರನಾಗಿ ಕೆಲಸ ಮಾಡಿದ್ದರು. ಅದಾದ ಬಳಿಕ ಉಡುಪಿಯ ಸ್ಥಳೀಯ ವಾಹಿನಿ ಪ್ರೈಮ್ ಟಿವಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ರವಿರಾಜ್ ಪತ್ನಿ, ಅವಳಿ- ಜವಳಿ ಪುತ್ರಿಯರನ್ನು ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನವರಾದ ರವಿರಾಜ್ ಅವರ ಅಂತ್ಯಕ್ರಿಯೆ ವಳಲಂಬೆಯಲ್ಲೇ ನಡೆಯಲಿದೆ.