ತೆಲುಗು ಸಿನಿಮಾ ರಂಗದ ಹಿರಿಯ ನಟ ಹಾಗೂ ಕನ್ನಡದ ಡಾ.ರಾಜಕುಮಾರ್ (Rajkumar) ಜೊತೆ ನಟಿಸಿದ್ದ ಕೈಕಾಲ ಸತ್ಯನಾರಾಯಣ (Satyanarayana) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿರುವ ಇವರು, 1962ರಲ್ಲಿ ತೆರೆಗೆ ಬಂದ ರಾಜಕುಮಾರ್ ನಟನೆಯ ಸ್ವರ್ಣಗೌರಿ ಸಿನಿಮಾದಲ್ಲಿ ಇವರು ಶಿವನ ಪಾತ್ರಧಾರಿಯಾಗಿ ನಟಿಸಿದ್ದಾರೆ.
ಸಿಪಾಯಿ ಕೂತುರು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸತ್ಯನಾರಾಯಣ ಈವರೆಗೂ ಏಳು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎನ್.ಟಿ.ಆರ್ ಸೇರಿದಂತೆ ಅನೇಕ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ನಾಲ್ಕು ವರ್ಷಗಳ ಹಿಂದೆ ತೆರೆಕಂಡ ಮಹೇಶ್ ಬಾಬು ನಟನೆಯ ಮಹರ್ಷಿ ಇವರ ನಟನೆಯ ಕೊನೆಯ ಸಿನಿಮಾವಾಗಿದೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?
1935ರ ಜುಲೈ 25 ರಂದು ಆಂಧ್ರಪ್ರದೇಶದಲ್ಲಿ ಜನಿಸಿರುವ ಸತ್ಯನಾರಾಯಣ, ಸಿನಿಮಾ ರಂಗದ ಮೇಲೆ ಸೆಳೆತ ಹಾಗೂ ರಂಗಭೂಮಿ ಮೇಲಿನ ಒಲವಿನಿಂದಾಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ವಿವಿಧ ಪಾತ್ರಗಳೇ ಅವರನ್ನು ಮತ್ತಷ್ಟು ಅವಕಾಶ ಸಿಗುವಂತೆ ಮಾಡಿದವು. ನಾಗೇಶ್ವರಮ್ಮ ಅವರನ್ನು ಮದುವೆಯಾಗಿರುವ ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಸತ್ಯನಾರಾಯಣ ಅವರ ನಿಧನಕ್ಕೆ ತೆಲುಗು ಚಿತ್ರೋದ್ಯಮ ಕಂಬನಿ ಮಿಡಿದಿದೆ.