ನವದೆಹಲಿ: ಕೇಳಿದಷ್ಟು ನೀರು ನಮಗೆ ಸಿಗದೇ ಇದ್ದರೂ ಮಹದಾಯಿ ತೀರ್ಪು ಸಮಾಧಾನ ತಂದಿದೆ ಎಂದು ವಕೀಲ ಮೋಹನ್ ಕಾತರಕಿ ಹೇಳಿದ್ದಾರೆ.
ನ್ಯಾಯಾಧಿಕರಣದ ತೀರ್ಪು ಪ್ರಕಟವಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋವಾ ಸರ್ಕಾರ ಎಲ್ಲ ನೀರು ನಮಗೆ ಸೇರಬೇಕೆಂದು ವಾದ ಮಂಡಿಸಿತ್ತು. ಆದರೆ ಈ ವಾದಕ್ಕೆ ಮನ್ನಣೆ ಸಿಕ್ಕಿಲ್ಲ. ಕೇವಲ 24 ಟಿಎಂಸಿ ನೀರನ್ನು ಮಾತ್ರ ನೀಡಿದೆ. ಹೀಗಾಗಿ ಗೋವಾಗೆ ಸೋಲಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಕರ್ನಾಟಕಕ್ಕೆ 13.05 ಟಿಎಂಸಿ ನೀರನ್ನು ನೀಡಿದೆ. ಕೇಳಿದಷ್ಟು ನೀರು ಸಿಗದೇ ಇದ್ದರೂ ತೀರ್ಪಿನ ಬಗ್ಗೆ ತೃಪ್ತಿಯಿದೆ. ಪೂರ್ಣ ಪ್ರಮಾಣದ ನೀರು ಸಿಗದ ಕಾರಣ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕೇ? ಅಥವಾ ನ್ಯಾಯಾಧಿಕರಣದಲ್ಲೇ ಪ್ರಶ್ನೆ ಮಾಡಬೇಕೇ ಎನ್ನುವುದನ್ನು ತೀರ್ಪನ್ನು ಓದಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಕೀಲ ನಿಶಾಂತ್ ಅವರು, ತೀರ್ಪಿನಲ್ಲಿ ಗೋವಾಕ್ಕೆ ಸಂಪೂರ್ಣ ನಿರಾಸೆಯಾಗಿದೆ. ನಾವು ಪ್ರಮುಖ ಬೇಡಿಕೆ ಮಾಡಿದ್ದು, ಹುಬ್ಬಳ್ಳಿ ಧಾರವಾಡ ಕುಡಿರುವ ನೀರಿನ ಸಮಸ್ಯೆ. ಈ ನಗರಗಳಿಗೆ ಬೇಡಿಕೆ ಇಟ್ಟಿದ್ದ 7.5 ಟಿಎಂಸಿ ನೀರಲ್ಲಿ 3.9 ಟಿಎಂಸಿ ನೀರು ಸಿಕ್ಕಿದೆ. ಖಾನಾಪುರ ತಾಲೂಕಿಗೆ 1 ಟಿಎಂಸಿ ನೀರು ಹಾಗೂ ಮಹದಾಯಿ ಹೈಡ್ರಾಲಿಕ್ ಯೋಜನೆಗೆ 8 ಟಿಎಂಸಿ ನೀಡಿದ್ದಾರೆ. ಒಟ್ಟಾರೆ 13.05 ಟಿಎಂಸಿ ನೀರು ಲಭ್ಯವಾಗಲಿದೆ ಎಂದರು. ಇದನ್ನೂ ಓದಿ: ಕರ್ನಾಟಕಕ್ಕೆ 13.05 ಟಿಎಂಸಿ ಮಹದಾಯಿ ನೀರು ಹಂಚಿಕೆ
ಗೋವಾಕ್ಕೆ ನೀಡಿರುವ 24 ಟಿಎಂಸಿ ಹಾಗೂ ಮಹಾರಾಷ್ಟ್ರಕ್ಕೆ ನೀಡಿರುವ 1.5 ಟಿಎಂಸಿ ನೀರು ಬಿಟ್ಟು ಉಳಿದ ನೀರು ಸಮುದ್ರಕ್ಕೆ ಹರಿದು ಹೋಗುತ್ತಾ ಅಥವಾ ಅರಣ್ಯ ಅಭಿವೃದ್ಧಿಗೆ ಈ ನೀರು ಬಳಕೆ ಮಾಡಲಾಗುತ್ತಾ ಎಂಬುವುದು ಇನ್ನು ಖಚಿತವಾಗಬೇಕಿದೆ. ಗೋವಾಕ್ಕೆ ನೀಡಿರುವ 24 ಟಿಎಂಸಿ ನೀರಿನಲ್ಲಿ 13 ಟಿಎಂಸಿ ಬಳಕೆಗೆ ಅವಕಾಶ ನೀಡಲಾಗುತ್ತದೆ. ಪ್ರಕರಣದ ಕುರಿತು ಗೋವಾ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. ಈ ಕುರಿತು ರಾಜ್ಯ ಸರ್ಕಾರ ಹಾಗೂ ವಿವಿಧ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹದಾಯಿ ನ್ಯಾಯಾಧೀಕರಣದ ಐತೀರ್ಪಿಗೆ ಗೋವಾ-ಮಹಾರಾಷ್ಟ್ರ ವಿರೋಧ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv