ಬೆಂಗಳೂರು: ಪಬ್ನಲ್ಲಿ ಗೂಂಡಾಗಿರಿ ನಡೆಸಿ ಮೂರು ತಿಂಗಳಿಂದ ಜೈಲಲ್ಲಿರುವ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ಮಗ ನಲಪಾಡ್ ಗೆ ಇಂದು ನಿರ್ಣಾಯಕ ದಿನವಾಗಿದೆ.
ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಜಾಮೀನು ಪಡೆದು ಹೊರಗೆ ಬರ್ತಾನೋ ಇಲ್ಲ ಇನ್ನಷ್ಟು ದಿನ ಕಾರಾಗೃಹದಲ್ಲೇ ಕಂಬಿ ಎಣಿಸ್ಬೇಕೋ ಅನ್ನೋದು ಸ್ಪಷ್ಟವಾಗಲಿದೆ. ಈತ ಸಲ್ಲಿಸಿದ್ದ ಜಾಮೀನು ಅರ್ಜಿ ಸಂಬಂಧ ಬೆಂಗಳೂರಿನ 66ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಲಿದೆ.
ಈಗಾಗ್ಲೇ ಸಿಸಿಬಿ ಪೊಲೀಸರು ಕೋರ್ಟ್ ಗೆ ಆರೋಪಪಟ್ಟಿ ಸಲ್ಲಿಸಿದ್ದು, ಜೈಲಿಂದ ಹೊರಬಂದರೂ ನಲಪಾಡ್ ಸಾಕ್ಷ್ಯ ನಾಶ ಮಾಡೋ ಸಾಧ್ಯತೆ ಇಲ್ಲ. ಹೀಗಾಗಿ ತಮ್ಮ ಕಕ್ಷಿದಾರನಿಗೆ ಜಾಮೀನು ಕೊಡುವಂತೆ ವಕೀಲ ಉಸ್ಮಾನ್ ವಾದಿಸಿದ್ದಾರೆ. ಆದ್ರೆ ಆರೋಪಪಟ್ಟಿ ಬಳಿಕವೂ ಜಾಮೀನು ನೀಡದ ಪ್ರಕರಣಗಳು ಹಲವಾರಿದ್ದು, ಈ ಕೇಸಲ್ಲೂ ಜಾಮೀನು ಕೊಡ್ಬೇಡಿ ಅಂತ ವಿಶೇಷ ಸರ್ಕಾರಿ ವಕೀಲ ಶ್ಯಾಮ್ಸುಂದರ್ ವಾದಿಸಿದ್ದಾರೆ.
ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.