ಕಲಬುರಗಿ: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ ಶ್ರೀ ವೆಂಕಟೇಶ ಸ್ವಾಮೀಜಿ ಎಂಬವರು, ಚಿಂಚೋಳಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಧಾನಸಭೆಯ ಉಪಚುನಾವಣೆಯಲ್ಲಿ ಸಹ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ಸ್ವಾಮೀಜಿ ಕೈಯಲ್ಲಿ ಕೇವಲ 9(ಒಂಬತ್ತು) ರೂಪಾಯಿ ಮಾತ್ರ ನಗದು ಹಣವಿದೆಯಂತೆ, ಹೀಗಿದ್ದರೂ ಕೂಡ ಭಕ್ತರಿಂದ ಸಂಗ್ರಹಿಸಿದ ಹಣದಿಂದ ನಾಮಪತ್ರಕ್ಕೆ ಬೇಕಾಗಿರುವ ಹಣ ಸಂದಾಯ ಮಾಡಿದ್ದಾರೆ. ಹಾಗೆಯೇ ವಾರಣಾಸಿ-ಚಿಂಚೋಳಿ ಬಿಟ್ಟು ಮಹಾರಾಷ್ಟ್ರದ ಸೋಲಾಪುರ ಲೋಕಸಭೆಯಲ್ಲಿ ಸಹ ಈ ಸ್ವಾಮೀಜಿ ಸ್ಪರ್ಧಿಸುತ್ತಿದ್ದಾರೆ.
ಹೀಗೆ ಯಾಕೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೀರಾ ಅಂತ ಸ್ವಾಮೀಜಿಗೆ ಪ್ರಶ್ನೆ ಕೇಳಿದರೆ, ನಾನು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಕೋಟ್ಯಾಧಿಪತಿ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದಾರೆ. ಬರೀ ಶ್ರೀಮಂತರಿಗೆ ಮಾತ್ರ ಚುನಾವಣೆಯಲ್ಲ ಬಡವರು ಸಹ ಸ್ಪರ್ಧಿಸಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವುದ್ದಾಗಿ ಸ್ವಾಮೀಜಿ ಉತ್ತರಿಸಿದ್ದಾರೆ.
ಈ ಅಪರೂಪದ ಸ್ವಾಮೀಜಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನವರಾಗಿದ್ದು, ಎಂ.ಕಾಂ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ವಾರಣಾಸಿಯಲ್ಲಿ ಮೋದಿ ನಾಮಪತ್ರ ಸಲ್ಲಿಸೋ ಮೊದಲೇ ವೆಂಕಟೇಶ ಸ್ವಾಮೀಜಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಆದ್ರೆ ನಾಮಪತ್ರವನ್ನು ತಿರಸ್ಕೃತವಾಗಿದೆ. ಅಲ್ಲದೆ ಹಿಂದುಸ್ತಾನ್ ಜನತಾ ಪಾರ್ಟಿಯಿಂದ ಸೊಲ್ಲಾಪುರದಲ್ಲಿ ಸ್ಪರ್ಧೆ ಮಾಡಿದ್ದರು. ಇದೀಗ ಚಿಂಚೋಳಿಯ ವಿಧಾನಸಭೆ ಉಪಚುನಾವಣೆಗೆ ಈ ಸ್ವಾಮೀಜಿ ಸ್ಪರ್ಧೆ ಮಾಡುತ್ತಿದ್ದಾರೆ.