ಚಿತ್ರದುರ್ಗ: ಉದ್ಯಮಿಗೆ ಚಾಕು ಇರಿದು 25 ಲಕ್ಷ ರೂಪಾಯಿ ದರೋಡೆ ಮಾಡಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಜಯನಗರದಲ್ಲಿ ನಡೆದಿದೆ.
ಹಿರಿಯೂರಿನ ಉದ್ಯಮಿ ವಲಿಸಾಬ್ ಎಂಬವರು ಇಂದು ಬೆಳಗ್ಗೆ ಹೊಸದುರ್ಗಕ್ಕೆ ಗುಟ್ಕಾ ವ್ಯಾಪಾರದ ಬಾಕಿ ವಸೂಲಿಗಾಗಿ ತೆರಳಿದ್ದು, ಹಣ ಸಂಗ್ರಹದ ಬಳಿಕ ಖಾಸಗಿ ಬಸ್ ಮೂಲಕ ಹಿರಿಯೂರಿಗೆ ವಾಪಾಸ್ ಆಗಿದ್ದರು. ಬಸ್ ನಿಲ್ದಾಣದಿಂದ ಮನೆಗೆ ಆಟೋದಲ್ಲಿ ತೆರಳುವಾಗ ಈ ಘಟನೆ ನಡೆದಿದೆ.
ಹೊಸದುರ್ಗದಿಂದಲೇ ಇವರನ್ನು ಹಿಂಬಾಲಿಸಿರೋ ದರೋಡೆಕೋರರು, ಮನೆ ಸಮೀಪಿಸುತ್ತಿರುವುದನ್ನ ಅರಿತು ಏಕಾಏಕಿ ಚಾಕುವಿನಿಂದ ವಲಿಸಾಬ್ ಗೆ ಇರಿದು 25 ಲಕ್ಷ ಹಣವಿರೋ ಬ್ಯಾಗನ್ನು ಲಪಟಾಯಿಸಿಕೊಂಡು ಪಲ್ಸರ್ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ.
ದರೋಡೆಕೋರರು ಪರಾರಿಯಾಗಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಚಾಕು ಇರಿತಕ್ಕೊಳಗಾಗಿರೋ ಗಾಯಾಳು ವಲಿಸಾಬ್ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದಾರೆ.
ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.