ಚಿಕ್ಕಬಳ್ಳಾಪುರ: ಮಾರ್ಚ್ 19 ರಂದು ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನಡೆದ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಅಂದು ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಬೇಡ ಅಂತ ಮೈಸೂರು ನಗರದಲ್ಲಿ ಚಳವಳಿ ಮಾಡಿದೆ. ಆದರೆ ಅದೇ ದಿನ ಚಿಕ್ಕಬಳ್ಳಾಪುರದಲ್ಲಿ ಆರ್ಆರ್ಆರ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. ಇದು ನನಗೆ ಬಹಳ ನೋವು ತಂದಿತು. ಇದು ಗಂಡು ಮೆಟ್ಟಿದ ಕನ್ನಡಿಗರ ನೆಲ, ಇಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ, ಮಾನ್ಯತೆ ಗೌರವ ಇರಬೇಕು. ಆದರೆ ತೆಲುಗು ಭಾಷೆಯ ಆರ್ಆರ್ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. ಮಾನ ಮಾರ್ಯಾದೆ ಇರುವವರು ಮಾಡುವ ಕೆಲಸ ಇದಲ್ಲ ಅಂತ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ
ಮುಖ್ಯಮಂತ್ರಿಗಳು ಒಳ್ಳೆಯವರು ಅವರನ್ನು ದಾರಿ ತಪ್ಪಿಸಿ ಕಾರ್ಯಕ್ರಮಕ್ಕೆ ಕರೆ ತಂದಿದ್ದಾರೆ. ಅವರಿಗೆ ಏನಾಗಿದೆ ಅಂದರೆ ಈ ಕಡೆ ಈ ಮಂತ್ರಿ ಆ ಕಡೆ ಆ ಮಂತ್ರಿ ಕರೆದ ಕಡೆ ಹೋಗಬೇಕಿದೆ. ಆರ್ಆರ್ಆರ್ ಪ್ರೀ ರಿಲೀಸ್ ಇವೆಂಟ್ ಮಾಡಿದ್ದು ಕನ್ನಡಿಗರಿಗೆ ಕನ್ನಡ ಚಿತ್ರರಂಗಕ್ಕೆ ಅಪಮಾನ. ಯಾರು ರಾಜಮೌಳಿ ಅವನು? ಅಂತ ಖಾರವಾಗಿ ಪ್ರಶ್ನೆ ಮಾಡಿ, ಏನು ಅವನದು ಹೈದರಾಬಾದ್ ಆಂಧ್ರದಲ್ಲಿ ತೆಲಂಗಾಣದಲ್ಲಿ ಮಾಡಿಕೊಳ್ಳಲಿ. ಕರ್ನಾಟಕದ ನಂದಿಬೆಟ್ಟದ ಪಕ್ಕಕ್ಕೆ ಬಂದು ಕನ್ನಡಿಗರ ನೆಲ ದುರ್ಬಳಕೆ ಮಾಡಿಕೊಂಡಿದ್ದು ಸರಿ ಇಲ್ಲ. ಈ ವಿಚಾರದಲ್ಲಿ ಜಿಲ್ಲಾಡಳಿತ ವಿಫಲ ಪೊಲೀಸ್ ಇಲಾಖೆ ವೈಫಲ್ಯ ಅನುಭವಿಸಿದೆ. ಡಿಸಿಯವರೇ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ನೀಡಿದ್ದೀರಾ? ಯಾವ ಕಾರಣಕ್ಕೆ ಕೊಟ್ರಿ? ಕನ್ನಡ ಚಿತ್ರ ನಾ ಎಂದಾದರೂ ಈ ತರ ಕಾರ್ಯಕ್ರಮ ಮಾಡಿದ್ದೀರಾ? ಮೆರವಣಿಗೆ ಪ್ರಚಾರ ಮಾಡಿದ್ದೀರಾ. ಯಾವ ತೆವಲಿಗೆ ಮಾಡಿದ್ದೀರಾ? ಏನ್ ತೀಟೆ ನಿಮ್ಮದು, ಅಂತ ಜಿಲ್ಲಾಡಳಿತದ ನಡೆ ಬಗ್ಗೆ ಖಂಡಿಸಿದರು. ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸುಧಾಕರ್ ರಾಜೀನಾಮೆಗೆ ಎಎಪಿ ಆಗ್ರಹ
ಕನ್ನಡ ಭಾಷೆಯ ಮೇಲೆ ಈ ರೀತಿಯ ದೌರ್ಜನ್ಯ ಸರಿ ಅಲ್ಲ. ಒಂದು ಕಡೆ ಶಾಸನ ಸಭೆ ನಡೆಯುತ್ತಿದ್ದು, ಇಲ್ಲಿ ನಡೆದಿರುವ ದುರಂತದ ಬಗ್ಗೆ ಖಂಡಿಸುತ್ತೇನೆ. ಸಮಗ್ರ ವಾದ ಉನ್ನತ ಮಟ್ಟದ ತನಿಖೆ ಮಾಡುವಂತೆ ಆಗ್ರಹಿಸುತ್ತೇನೆ ಎಂದರು. ನಿಮ್ಮ ವ್ಯಾಪಾರಕ್ಕೋಸ್ಕರ ಕನ್ನಡಿಗರ ಭೂಮಿ ಬಳಸಿದ್ದು ಅಕ್ಷಮ್ಯ ಅಪರಾಧ. ನಾನು ನನ್ನ ಜೀವನದುದ್ದಕ್ಕೂ ಕನ್ನಡ ಬಿಟ್ಟು ಬೇರೆ ಮಾತು ಇಲ್ಲ ಪಕ್ಷಾಂತರ ಮಾಡಿಲ್ಲ. ಕನ್ನಡಕ್ಕೆ ಅಪಮಾನ ಆಗಿದೆ. ಹೀಗಾಗಿ ಸಚಿವ ಡಾ. ಕೆ. ಸುಧಾಕರ್ ಬಹಿರಂಗ ಕ್ಷಮಾಪಣೆ ಕೇಳಬೇಕು. ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ಕೊಡಬೇಕು. ಇದು ಕನ್ನಡಿಗರು ಮಾಡಿದ ಅಪಮಾನ ನೋವಿನ ಸಂಗತಿ. ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನ ಬಹಿಷ್ಕಾರ ಹಾಕಬೇಕು. ಶಿವರಾಜ್ ಕುಮಾರ್ ಸಹ ಕಾರ್ಯಕ್ರಮಕ್ಕೆ ಬರಬಾರದಿತ್ತು ಎಂದರು.