ಚಾಮರಾಜನಗರ: ಸಚಿವ ಈಶ್ವರಪ್ಪ ಅವರನ್ನು ಏಕಾಏಕಿ ರಾಷ್ಟ್ರದ್ರೋಹಿ ಎಂದು ಕರೆಯುವುದು ಸರಿಯಲ್ಲ. ಅವರ ರಾಜೀನಾಮೆಯನ್ನು ಆಗ್ರಹಿಸಿ ಸದನದ ಕಲಾಪ ಬಲಿ ಕೊಡುವುದು ಸರಿಯಲ್ಲ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ಈಶ್ವರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರ ಹಾರಾಟ ಕೂಗಾಟ ಹೊಸದೇನಲ್ಲ, ಅವರ ಮಾತುಗಳಿಗೆ ಯಾವುದೇ ಬ್ರೇಕ್ ಇಲ್ಲ. ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯುವುದು ಸಮಂಜಸವಲ್ಲ, ಅಧಿವೇಶನ ನಡೆಯುವುದೇ ಕಡಿಮೆ. ಅಂತಹುದ್ದರಲ್ಲಿ ಸಿದ್ದರಾಮಯ್ಯ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ, ಈಶ್ವರಪ್ಪ ಅವರ ವಿಚಾರವನ್ನಿಟ್ಟುಕೊಂಡು ಅಹೋರಾತ್ರಿ ಹೋರಾಟ ನಡೆಸಿ ಸದನ ಬಲಿಕೊಡುವುದು ಶೋಭೆಯಲ್ಲ. ಚರ್ಚೆ ಮಾಡುವ ವಿಷಯಗಳು ಬೇಕಾದಷ್ಟಿವೆ, ಧರಣಿ ಕೈ ಬಿಟ್ಟು ಆ ಬಗ್ಗೆ ಗಮನ ನೀಡಿ ಎಂದರು. ಇದನ್ನೂ ಓದಿ: ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು: ಆರ್.ಅಶೋಕ್
ಮೇಕೆದಾಟು ಯೋಜನೆಗೆ ಆಗ್ರಹಿಸಿ ಹೋರಾಟ ಮಾಡಿದ್ದು ನಾವು. ಈಗ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿತು?, ಡಿಕೆ ಶಿವಕುಮಾರ್ ಅವರೇ ಜಲಸಂಪನ್ಮೂಲ ಸಚಿವರಾಗಿದ್ದರು. ಯಾಕೆ ಮೇಕೆದಾಟು ಯೋಜನೆ ಜಾರಿ ಮಾಡಲಿಲ್ಲ ಎಂದು ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಇದೇ ವೇಳೆ ಹಿಜಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಜಬ್ ಇವತ್ತಿನದ್ದಲ್ಲ, ಮೊದಲಿನಿಂದಲೂ ಇದೆ. ಆದರೆ ಕೇಸರಿ ಶಾಲು ಹೊಸ ಪ್ರಾಡಕ್ಟ್ ಎಂದು ಅವರು ವ್ಯಂಗ್ಯವಾಡಿದರು.