ಚಿಕ್ಕಬಳ್ಳಾಪುರ: ಆಶಾಕಾರ್ಯಕರ್ತೆಯೊಬ್ಬಳು ಜ್ವರದಿಂದ ಬಳಲುತ್ತಿದ್ದವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪವೊಂದು ಶಿಡ್ಲಘಟ್ಟ ತಾಲೂಕಿನಲ್ಲಿ ಕೇಳಿಬಂದಿದೆ
ತಾಲೂಕಿನ ಮಾರಪ್ಪನಹಳ್ಳಿ ನಿವಾಸಿಗಳಾದ ನರಸಿಂಹಮೂರ್ತಿ ಹಾಗೂ ಬ್ಯಾಟಪ್ಪ ಎಂಬವರಿಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎನ್ನಲಾಗಿದೆ.
ಏನಿದು ಘಟನೆ?: ಗ್ರಾಮದ ಆಶಾ ಕಾರ್ಯಕರ್ತೆ ಪದ್ಮಾವತಿ, ಜ್ವರ ಹಾಗೂ ಬಾಯಿ ಹುಣ್ಣಿನಿಂದ ಬಳಲುತ್ತಿದ್ದ 30 ವರ್ಷದ ನರಸಿಂಹಮೂರ್ತಿ ಹಾಗೂ 70 ವರ್ಷದ ಬ್ಯಾಟಪ್ಪ ಎಂಬವರನ್ನು ಕಳೆದ ಶುಕ್ರವಾರ ಶಿಡ್ಲಘಟ್ಟ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಂತಾನಹರಣ ಚಿಕಿತ್ಸೆ ಮಾಡಿಸಿದ್ದಾಳೆ. ಇದೀಗ ಶಸ್ತ್ರ ಚಿಕಿತ್ಸೆ ನಂತರ ನರಸಿಂಹಮೂರ್ತಿ ಪತ್ನಿ ಛಾಯಾ ಆಶಾಕಾರ್ಯಕರ್ತೆ ಪದ್ಮಾವತಿ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದ್ರೆ ಇದನ್ನ ನಿರಾಕರಿಸಿರುವ ಆಶಾಕಾರ್ಯಕರ್ತೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಅನಿಲ್ ಕುಮಾರ್, ಶುಕ್ರವಾರದ ಕ್ಯಾಂಪಿನಲ್ಲಿ 20 ಮಂದಿಗೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಎಲ್ಲರ ಒಪ್ಪಿಗೆಯನ್ನ ಪಡೆದೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಲವಂತವಾಗಿ ಯಾರಿಗೂ ಮಾಡಲು ಆಗುವುದಿಲ್ಲ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ವ್ಯಾಸೆಕ್ಟೆಮಿ ಶಸ್ತ್ರಚಿಕಿತ್ಸೆಗೆ ಒಳಪಡುವ ಪ್ರತಿಯೊಬ್ಬರಿಗೂ ಸರ್ಕಾರದಿಂದ 1200 ರೂಪಾಯಿ ಹಾಗೂ ಆಶಾ ಕಾರ್ಯಕರ್ತೆಗೆ 200 ರೂಪಾಯಿ ಗೌರವಧನ ನೀಡಲಾಗುತ್ತದೆ. ಹೀಗಾಗಿ ಹಣದ ಆಸೆಗೆ ಆಶಾಕಾರ್ಯಕರ್ತೆ ಹೀಗೆ ಮಾಡಿದ್ದಾಳೆ ಅಂತ ನರಸಿಂಹಮೂರ್ತಿ ಸಂಬಂಧಿಕರು ದೂರಿದ್ದಾರೆ. ಈ ಕುರಿತು ಆಶಾಕಾರ್ಯಕರ್ತೆ ಮೇಲೆ ದೂರು ದಾಖಲಾಗುತ್ತಿದ್ದಂತೆ ಆಶಾ ಕಾರ್ಯಕರ್ತೆ ನರಸಿಂಹಮೂರ್ತಿಯವರ ಕಡೆಯ ಮಹಿಳೆಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ದೂರು ನೀಡಲು ಮುಂದಾಗಿದ್ದಾರೆ.
ಸದ್ಯ ಈ ಘಟನೆ ಮಾರಪ್ಪನಹಳ್ಳಿ ಗ್ರಾಮದಲ್ಲಿ ರಾಜಕೀಯ ಬಣ್ಣ ಸಹ ಪಡೆದುಕೊಂಡಿದೆ. ಪರ ವಿರೋಧದ ನಡುವೆ ವಾದ-ವಿವಾದ ವಾಗ್ವಾದಗಳು ಜೋರಾಗಿ ನಡೆದಿದ್ದು, ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.