ವಾರಣಾಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲಿಂ ಮಹಿಳೆಯರು ತಮ್ಮ ಕೈಯಿಂದಲೇ ತಯಾರಿಸಿದ ವಿಶೇಷ ರಾಖಿಯೊಂದನ್ನು ರಕ್ಷಾಬಂಧನ್ಗೆ ಕಳುಹಿಸಿಕೊಟ್ಟಿದ್ದಾರೆ.
ವಾರಣಾಸಿ ಕ್ಷೇತ್ರದ ಸಂಸದರು ಆಗಿರುವ ಮೋದಿ ಅವರಿಗೆ ಇದೇ ನಗರದ ರಾಂಪುರದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಷೇಧ ಮಾಡಿದ್ದಕ್ಕೆ ಸಂತೋಷ ಪಟ್ಟು, ಮೋದಿ ನಮ್ಮೆಲ್ಲರ ಹಿರಿಯ ಸಹೋದರ ಎಂದು ರಾಖಿಯನ್ನು ಕಳುಹಿಸಿಕೊಟ್ಟಿದ್ದಾರೆ.
ಈ ವಿಚಾರದ ಬಗ್ಗೆ ಖುಷಿಯಿಂದ ಮಾತನಾಡಿರುವ ಹುಮಾ ಬಾನೊ ಎಂಬ ಮುಸ್ಲಿಂ ಮಹಿಳೆ, ತ್ರಿವಳಿ ತಲಾಖ್ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ತ್ರಿವಳಿ ತಲಾಖ್ ಎಂಬ ದುಷ್ಟ ನೀತಿಯನ್ನು ಅಂತ್ಯ ಮಾಡಿದ ಮೋದಿ ಅವರು ನಮಗೆ ಹಿರಿಯ ಅಣ್ಣನಂತೆ. ಆದ್ದರಿಂದ ಅವರಿಗೆ ನಮ್ಮ ಕೈಯಿಂದ ಮಾಡಿದ ರಾಖಿಯನ್ನು ಕಳುಹಿಸುತ್ತಿದ್ದೇವೆ. ದೇಶದ ಎಲ್ಲಾ ಮುಸ್ಲಿಂ ಮಹಿಳೆಯರಿಗೆ ಮೋದಿ ಹಿರಿಯ ಸಹೋದರನಂತೆ ಎಂದು ಹೇಳಿದ್ದಾರೆ.
ಇದನ್ನು “ಪ್ರಚಾರ”ಕ್ಕಾಗಿ ಮಾಡಿರುವುದು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಲೇವಡಿ ಮಾಡಿದೆ. ಇದರ ಬಗ್ಗೆ ಮಾತನಾಡಿರುವ ಐಯುಎಂಎಲ್ನ ರಾಜ್ಯ ಅಧ್ಯಕ್ಷ ಮತಿನ್ ಖಾನ್, “ಆರ್ಎಸ್ಎಸ್ನ ಮುಸ್ಲಿಂ ಅಂಗಸಂಸ್ಥೆ ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದೆ. ಇದನ್ನು ಮಾಡಲು ಅವರು ಮುಸ್ಲಿಮರನ್ನು ನೇಮಿಸಿಕೊಂಡಿದ್ದಾರೆ. ಅಧಿಕಾರದಲ್ಲಿವವರು ಜನರ ಮೇಲೆ ಒತ್ತಡ ಹಾಕಿ ಮಾಡಿಸಲಾಗುತ್ತದೆ. ಸರ್ಕಾರದ ಪ್ರಚಾರಕ್ಕಾಗಿ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.