– ಭಕ್ತರಲ್ಲಿ ಜಾಗೃತಿ ಮೂಡಿಸಲು ಕ್ರಮ
– ಮೂರ್ತಿ ಸ್ಪರ್ಶಿಸದಂತೆ ಭಕ್ತರಿಗೆ ಸೂಚನೆ
ವಾರಾಣಸಿ: ಭಾರತಕ್ಕೆ ಕೊರೊನಾ ವೈರಸ್ ಒಕ್ಕರಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸರ್ಕಾರ ಸಲಹೆ ನೀಡುತ್ತಿದೆ. ಇದರ ಬೆನ್ನಲ್ಲೇ ವಾರಾಣಸಿಯಲ್ಲಿ ದೇವಸ್ಥಾನದ ಅರ್ಚಕರು ಶಿವಲಿಂಗಕ್ಕೆ ಮಾಸ್ಕ್ ಹಾಕಿ ಅಚ್ಚರಿ ಮೂಡಿಸಿದ್ದಾರೆ.
ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶ್ವನಾಥನಿಗೆ ಅಲ್ಲಿನ ಅರ್ಚಕರು ಮಾಸ್ಕ್ ಹಾಕಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ಮೂರ್ತಿಯನ್ನು ಸ್ಪರ್ಶಿಸದಂತೆ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜ್ವರ, ಕೆಮ್ಮು ಇದ್ರೆ ತಿರುಪತಿಗೆ ಬರಲೇ ಬೇಡಿ- ಟಿಟಿಡಿ
ದೇಶಾದ್ಯಂತ ಕೊರೊನಾ ವೈರಸ್ ಹರಡಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವನಾಥನಿಗೆ ಮಾಸ್ಕ್ ಹಾಕಿದ್ದೇವೆ. ಇದರಲ್ಲಿ ವಿಶೇಷವೇನಿಲ್ಲ ಚಳಿಗಾಲವಿದ್ದಾಗ ಹೇಗೆ ಬಟ್ಟೆ ಹಾಕುತ್ತೇವೆ, ಬಿಸಿಲಿನ ಸಂದರ್ಭದಲ್ಲಿ ಹೇಗೆ ಫ್ಯಾನ್, ಎಸಿ ಹಾಕುತ್ತೇವೋ ಹಾಗೇ ಇದೀಗ ವಿಶ್ವನಾಥನ ಮೂರ್ತಿಗೆ ಮಾಸ್ಕ್ ಹಾಕಿದ್ದೇವೆ ಅಷ್ಟೆ ಎಂದು ದೇವಸ್ಥಾನದ ಅರ್ಚಕ ಕೃಷ್ಣ ಆನಂದ್ ಪಾಂಡೆ ತಿಳಿಸಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಯಾವುದೇ ಕಾರಣಕ್ಕೂ ಮೂರ್ತಿಯನ್ನು ಸ್ಪರ್ಶಿಸಿ ನಮಸ್ಕರಿಸದಂತೆ ಭಕ್ತರಲ್ಲಿ ತಿಳಿಸಿದ್ದೇವೆ. ಯಾರೋ ಒಬ್ಬರು ಕೊರೊನಾ ಇರುವ ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ, ಅದನ್ನು ಮತ್ತೊಬ್ಬರು ಮುಟ್ಟಿದರೆ ಅವರಿಗೂ ಹರಡುತ್ತದೆ. ಹೀಗಾಗಿ ಮೂರ್ತಿಯನ್ನು ಸ್ಪರ್ಶಿಸದಂತೆ ಮನವಿ ಮಾಡಿದ್ದೇವೆ ಎಂದು ಪಾಂಡೆ ವಿವರಿಸಿದ್ದಾರೆ.
ಅಲ್ಲದೆ ಈ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಇಲ್ಲಿನ ಅರ್ಚಕರು ಮಾಸ್ಕ್ ಧರಿಸಿಯೇ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ದೇವಸ್ಥಾನಕ್ಕೆ ಬರುತ್ತಿದ್ದಾರೆ.