ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ (Tumakuru University) ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ (G Parameshwar) ಗುರುವಾರ ಭರವಸೆ ನೀಡಿದರು.
ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ (Valmiki Jayanthi) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 5 ಸಾವಿರ ವರ್ಷಗಳ ಹಿಂದೆ ಹುಟ್ಟಿದ ವರ್ಣಾಶ್ರಮ ಪದ್ಧತಿಯಿಂದ ಈಗಲೂ ಶ್ರಮಿಕ ವರ್ಗದವರನ್ನು ಕೆಲಸದವರೆಂದು ಗುರುತಿಸುತ್ತಿರುವುದು ನಮ್ಮ ದೌರ್ಭಾಗ್ಯ. ದೇಶದಲ್ಲಿ ಶ್ರಮಿಕ ವರ್ಗ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಶೋಷಣೆ ನಿಂತಿಲ್ಲ. ಸಂವಿಧಾನದಲ್ಲಿ ಸಮಾನತೆ ಹಕ್ಕು ನೀಡಿದ್ದರೂ ಸಮಾಜದಲ್ಲಿ ಮೇಲ್ವರ್ಗ- ಕೆಳವರ್ಗ ಎಂಬ ಭೇದ ಸೃಷ್ಟಿಸಿ ಶೋಷಣೆ ಮುಂದುವರಿದಿದೆ ಎಂದು ವಿಷಾದಿಸಿದರು. ಇದನ್ನೂ ಓದಿ: ಶ್ಯೂರಿಟಿ ನೀಡಲು ಸಿಂಧನೂರು ಡಿವೈಎಸ್ಪಿ ಕಚೇರಿಗೆ ಸೂಲಿಬೆಲೆ ಹಾಜರು
ವ್ಯಕ್ತಿಯ ವ್ಯಕ್ತಿತ್ವವನ್ನು ಜಾತಿಯಿಂದ ಗುರುತಿಸುವುದು ನಿಂತಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿ ಅವರಂತಹ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಸಂಡೂರು ಟಿಕೆಟ್ ಯಾರಿಗೆ? – ಬಿಜೆಪಿ, ಕಾಂಗ್ರೆಸ್ನಿಂದ ಲಾಬಿ ಜೋರು
ಸಾಮಾನ್ಯ ವ್ಯಕ್ತಿಯಾಗಿದ್ದ ರತ್ನಾಕರ ನಂತರ ಪರಿವರ್ತನೆ ಹೊಂದಿ ವಾಲ್ಮೀಕಿಯಾಗಿ 24,000 ಶ್ಲೋಕಗಳಿರುವ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ರಾಮಾಯಣ ಕೃತಿಯ ಮೂಲಕ ಮನುಷ್ಯ ಜೀವನವು ಸತ್ಯ, ಧರ್ಮದ ಆಧಾರದ ಮೇಲೆ ನಿಂತಿದೆ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾಋಷಿಯಾಗಿದ್ದಾರೆ. ನಮ್ಮಲ್ಲಿರುವ ದುಷ್ಟ ಗುಣಗಳನ್ನು ಸಂಹಾರ ಮಾಡಿ ಉತ್ತಮ ಗುಣ ಮೈಗೂಡಿಸಿಕೊಳ್ಳಬೇಕು ಎಂಬುದೇ ರಾಮಾಯಣದ ಸಾರವಾಗಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ 10ನೇ ತರಗತಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದವರನ್ನು ಸನ್ಮಾನಿಸಲಾಯಿತು. ಇದನ್ನೂ ಓದಿ: ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್