ಬಾಗಲಕೋಟೆ: ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿವಾದ ಕಾಂಗ್ರೆಸ್ ನಲ್ಲಿ (Congress) ತಾರಕಕ್ಕೇರಿದೆ. ಸಿಎಂ ಬದಲಾವಣೆ ಅಂತ ಕೆಲವರು ಹೇಳಿದ್ರೆ, ಕೆಲವರು ದಲಿತ ಸಿಎಂ ಅಂತಿದ್ದಾರೆ. ಈ ಮಧ್ಯೆ ದಲಿತ ಸಿಎಂ ಬಗ್ಗೆ ಪ್ರಸ್ತಾಪಿಸುತ್ತಾ ಸತೀಶ್ ಜಾರಕಿಹೊಳಿ (Sathish Jarakiholi) ಪರ ವಾಲ್ಮೀಕಿ ಸ್ವಾಮೀಜಿ ಭರ್ಜರಿ ಬ್ಯಾಟಿಂಗ್ ಬೀಸಿದ್ದಾರೆ. ದಲಿತರು ಸಿಎಂ ಆಗಬಾರದಾ? ಕೇವಲ ವೋಟ್ ಬ್ಯಾಂಕ್ ಆಗಬೇಕಾ ಎಂದು ವಾಲ್ಮೀಕಿ ಸ್ವಾಮೀಜಿ ಗುಡುಗು ಹಾಕುವ ಮೂಲಕ ರಾಜ್ಯ ರಾಜಕೀಯದಲ್ಲಿ ಕಿಚ್ಚೆಬ್ಬಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಅಸಮಾಧಾನಗಳು ಮೇಲಿಂದ ಮೇಲೆ ಸ್ಫೋಟಿಸುತ್ತಲೇ ಇವೆ. ಸಚಿವ ಸ್ಥಾನ ಆಗಿರಬಹುದು ಡಿಸಿಎಂ ಆಗಿರಬಹುದು ಕೈ ನಾಯರು ಒಂದಿಲ್ಲೊಂದು ಹೇಳಿಕೆ ಕೊಡುತ್ತಲೇ ಇದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ ವಾಲ್ಮೀಕಿ ಸ್ವಾಮೀಜಿ ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಆ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಬಾಗಲಕೋಟೆಯಲ್ಲಿ (Bagalkote) ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ಮಾತಾಡಿದ ವಾಲ್ಮೀಕಿ ಪ್ರಸನ್ನಾನಂದ ಶ್ರೀ, ದಲಿತ ಸಿಎಂ ಕೂಗೆಬ್ಬಿಸಿದ್ದಾರೆ. ಸತೀಶ್ ಜಾರಕಿಹೊಳಿಗೆ ನಾಡಿನ ಸಿಎಂ ಆಗಲು ಎಲ್ಲ ಅರ್ಹತೆಗಳಿವೆ. ಅವರ ಬೆನ್ನಿಗೆ ನಾವೆಲ್ಲಾ ನಿಲ್ಲಬೇಕಿದೆ. ರಾಜ್ಯದಲ್ಲಿ ದಲಿತ ಸಿಎಂ ಯಾಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.
ವಾಲ್ಮೀಕಿ ಸಮುದಾಯದ ಸಚಿವ ಕೆ.ಎನ್ ರಾಜಣ್ಣ ಇತ್ತೀಚಿಗೆ ದಲಿತ ಸಿಎಂ ಹೆಸರಲ್ಲಿ ಪರಮೇಶ್ವರ್ ಹೆಸರು ಹೇಳಿದ್ದರು. ವಾಲ್ಮೀಕಿ ಸ್ವಾಮೀಜಿ ಸತೀಶ್ ಪರ ಬ್ಯಾಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಜಾಣ ಉತ್ತರ ನೀಡಿ ಸತೀಶ್ ಜಾರಕಿಹೊಳಿ ಜಾರಿಕೊಂಡರು. ಜೊತೆಗೆ ಪರೋಕ್ಷವಾಗಿ ಮನದಲ್ಲಿನ ಸಿಎಂ ಆಗುವ ಬಯಕೆ ಇರುವ ಬಗ್ಗೆಯೂ ಸೂಕ್ಷ್ಮವಾಗಿ ಹೇಳಿದರು. ನಮ್ಮ ಆಶಯ ಇರಬಹುದು ಸಮುದಾಯದ ಆಶಯ ಇರಬಹುದು ಅದು ಬೇರೆ. ಪಕ್ಷ ದೊಡ್ಡದು. ಪಕ್ಷದ ತೀರ್ಮಾನ ಅಂತಿಮ, ಸಮಯ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕಾಗಲ್ಲ ಎಂದರು. ಇದನ್ನೂ ಓದಿ; ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್ ಶರ್ಮಾ ಪತ್ನಿ ರಿತಿಕಾ
ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರು ಸಚಿವರ ಬಾಯಿಗೆ ಕಾಂಗ್ರೆಸ್ ಹೈಕಮಾಂಡ್ ಬೀಗ ಹಾಕುತ್ತಿದೆ. ಇದೆ ವೇಳೆ ವಾಲ್ಮೀಕಿ ಸ್ವಾಮೀಜಿ ದಲಿತ ಸಿಎಂ ಅಸ್ತ್ರದ ಮೂಲಕ ಜಾರಕಿಹೊಳಿ ಪರ ಬ್ಯಾಟ್ ಮಾಡಿದ್ದು, ಸಿಎಂ ಬದಲಾವಣೆ ಚರ್ಚೆ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.