ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನ ತಮ್ಮ ವಿಜಯೋತ್ಸವ ಭಾಷಣದಲ್ಲಿ ಬಿಜೆಪಿಯ ಹಿರಿಯ ನಾಯಕರ ಕಾರ್ಯವನ್ನು ನೆನಪಿಸಿ ಗೌರವಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿನ ಭಾಷಣದಲ್ಲಿ, ಅಧಿಕಾರ ಜನಸೇವೆಗೆ ಇರುವ ಅವಕಾಶ. ನಮಗೆ ಹಲವು ಬಾರಿ ಗೆಲುವು ಸಿಕ್ಕಿದೆ. ಈ ಗೆಲುವಿನ ಹಿಂದೆ 4 ತಲೆಮಾರುಗಳು ಈ ಕೆಲಸ ಮಾಡಿದೆ. ಅಟಲ್, ಅಡ್ವಾಣಿ ತಮ್ಮ ಜೀವನವನ್ನು ಬಿಜೆಪಿಗಾಗಿ ಮುಡಿಪಾಗಿಟ್ಟಿದ್ದರು. ಅವರಿಂದಲೇ ಇಂದು ಬಿಜೆಪಿ ಹೆಮ್ಮರವಾಗಿದೆ. ಯಾವುದೇ ಮರವಾದರೂ ಬಾಗಲೇಬೇಕು. ನಮಗೆ ಬಾಗುವ ಸಮಯ ಬಂದಿದೆ ಎಂದು ಹೇಳುವ ಮೂಲಕ ಹಿರಿಯರ ಸೇವೆಯನ್ನು ಸ್ಮರಿಸಿಕೊಂಡರು.
ಜನಸಂಘ ಎನ್ನಿ, ಬಿಜೆಪಿ ಎನ್ನಿ. ಇದು ಬಿಜೆಪಿ ಸುವರ್ಣ ಸಮಯ. ಈ ಸಮಯ ಅಚಾನಕ್ ಆಗಿ ಸಿಕ್ಕಿದ್ದಲ್ಲ. ಹಿರಿಯ ನಾಯಕರ ಕಠೋರ ಪರಿಶ್ರಮದಿಂದಲೇ ಇದು ಸಿಕ್ಕಿದೆ ಎಂದರು.
ಈ ಫಲಿತಾಂಶ ನಮಗೆ ಭಾವನಾತ್ಮಕವೂ ಹೌದು. ಈ ವರ್ಷ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಜನ್ಮ ಶತಮಾನೋತ್ಸವ ವರ್ಷ. ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಸ್ಥಳ ಉತ್ತರ ಪ್ರದೇಶ. ಈ ವೇಳೆಯಲ್ಲೇ ಈ ಗೆಲುವು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಬಡವರಲ್ಲಿ ಸಾಮರ್ಥ್ಯ ನನಗೆ ಕಾಣಿಸುತ್ತಿದೆ. ಅವರ ಶಕ್ತಿಯನ್ನು ನಾನು ಗುರುತಿಸುತ್ತೇನೆ. ರಾಷ್ಟ್ರ ನಿರ್ಮಾಣದಲ್ಲಿ ಬಡವರ ಕೊಡುಗೆ ಅಪಾರವಾಗಿದ್ದು, ಈ ದೇಶದ ದೊಡ್ಡ ಬಲ ಇಲ್ಲಿನ ಬಡವರು. ಬಿಜೆಪಿಯ ವಿಜಯಯಾತ್ರೆ ಮುಂದುವರಿಯುತ್ತಿದೆ. ಮೊದಲಿಗಿಂತ ಉತ್ತಮ ಫಲಿತಾಂಶವನ್ನು ಬಿಜೆಪಿ ಗಳಿಸುತ್ತಿದೆ. ಅಮಿತ್ ಶಾ ಬಿಜೆಪಿಯನ್ನು ಬಲು ದೊಡ್ಡ ಪಕ್ಷವಾಗಿ ಮಾಡಿದ್ದಾರೆ.ಇದಕ್ಕಾಗಿ ಅಮಿತ್ ಶಾ ಮತ್ತು ತಂಡಕ್ಕೆ ಮೋದಿ ಅಭಿನಂದನೆ ಸಲ್ಲಿಸಿದರು.