ಬೆಂಗಳೂರು: ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಶಾಸಕರ ಜೊತೆ ಸಭೆ ಮಾಡಿ ಲಸಿಕೆ ಅಭಿಯಾನ ಮಾಡ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನಲೆ ರಾಜ್ಯಾದ್ಯಂತ ನಡೆಯುತ್ತಿರುವ ಬೃಹತ್ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ನಗರದ ಹೆಬ್ಬಾಳ ವ್ಯಾಪ್ತಿಯ ವಾರ್ಡ್ 18ರ ಗೆದ್ದಲಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಆರ್.ಅಶೋಕ್ ಚಾಲನೆ ನೀಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳ ಹುಟ್ಟುಹಬ್ಬದ ಹಿನ್ನೆಲೆ ಲಸಿಕೆ ಅಭಿಯಾನ ಮಾಡುತ್ತಿದ್ದೇವೆ. ಬೆಂಗಳೂರಲ್ಲಿ ಒಟ್ಟು 2,200 ವ್ಯಾಕ್ಸಿನ್ ಸೆಂಟರ್ ಮಾಡಿದ್ದೇವೆ. ಬೆಂಗಳೂರಿನಾದ್ಯಾಂತ ಇವತ್ತು ಒಂದೇ ದಿನ 5 ಲಕ್ಷ ಲಸಿಕೆ ನೀಡುವ ಗುರಿಹೊಂದಿದ್ದೇವೆ. ಜನರಿಗೆ ಎರಡು ಡೋಸ್ ಸಿಗಬೇಕು ಅನ್ನೋದು ಅಭಿಯಾನದ ಉದ್ದೇಶ ಎಂದರು. ಇದನ್ನೂ ಓದಿ: ರಾಹುಲ್ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್
ಹುಟ್ಟುಹಬ್ಬದ ಹಿನ್ನೆಲೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಬೆಂಗಳೂರಿನಲ್ಲಿ ಕ್ಷೇತ್ರವಾರು ಅಭಿಯಾನ ಮಾಡ್ತೆವೆ. ಬೆಂಗಳೂರಿನ ಎಲ್ಲಾ ಕ್ಷೇತ್ರದ ಶಾಸಕರ ಜೊತೆ ಮಾತನಾಡಿ ಯಾರಿಗೆ ಲಸಿಕೆ ಸಿಕ್ಕಿಲ್ಲ ಅಂತವರಿಗೆ ಒಂದೇ ಬಾರಿ ಐದು ಹತ್ತು ಸಾವಿರ ಲಸಿಕೆ ಕೊಡುವ ಬಗ್ಗೆ ಚರ್ಚೆ ಮಾಡ್ತೀನಿ. ಈ ಬಗ್ಗೆ ಒಂದೊಂದು ದಿನ ಒಬ್ಬೊಬ್ಬ ಶಾಸಕರ ಜೊತೆ ಚರ್ಚೆ ಮಾಡಿ ಅಭಿಯಾನ ಮಾಡ್ತೇವೆ. ವಿಶೇಷವಾಗಿ ಬಡವರು, ಕೂಲಿ ಕಾರ್ಮಿಕರು, ಹಕ್ಕಿಪಿಕ್ಕಿ ಇಂತವರನ್ನು ಗಮನದಲ್ಲಿಟ್ಟುಕೊಂಡು ಅಭಿಯಾನ ಮಾಡ್ತೇವೆ. ಲಸಿಕೆ ಬಗ್ಗೆ ಸಾಕಷ್ಟು ಹಳ್ಳಿಗಳಲ್ಲೂ ಭಯ ಬೀಳುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳು ಸಭೆ ಮಾಡಿದ್ದೇನೆ. ಆ ಭಾಗದ ನಾಯಕರು ಸಮುದಾಯ ಮುಖಂಡರ ಜೊತೆ ಮಾತನಾಡಿ ಅವರಿಗೂ ಲಸಿಕೆ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಜಮೀನಿನಲ್ಲಿ ಗಾಂಜಾ ಬೆಳೆದ ಮೂವರು ರೈತರ ಬಂಧನ
ಕಾರ್ಯಕ್ರಮದಲ್ಲಿ ಶಾಸಕ ಭೈರತಿ ಸುರೇಶ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ಸ್ಥಳೀಯ ಮುಖಂಡರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.