ಬೆಂಗಳೂರು: 107 ವರ್ಷದ ಪುರಾತನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಐಐಟಿ ಮಾದರಿಯ ಕ್ಯಾಂಪಸ್, ಶೈಕ್ಷಣಿಕ ಚಟುವಟಿಕೆ, ಕೋರ್ಸ್ ಗಳನ್ನ ಮೇಲ್ದರ್ಜೆಗೇರಿಸಲು ಉನ್ನತ ಶಿಕ್ಷಣ ಇಲಾಖೆ ಹೊಸ ಕಾರ್ಯಕ್ರಮ ರೂಪಿಸಿಕೊಂಡಿದೆ.
ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್(ಯುವಿಸಿಇ) ಆಡಳಿತ ಮಂಡಳಿಯ ಸಭೆಯಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ ಐಐಟಿ ಮಾದರಿ ಬಗ್ಗೆ ಪ್ರಸ್ತಾಪ ಮಾಡಿದ್ರು. 107 ವರ್ಷದ ಇತಿಹಾಸವುಳ್ಳ ಯುವಿಸಿಇ ಅಭಿವೃದ್ಧಿ ಸರ್ಕಾರದ ಉದ್ದೇಶ ಇದಕ್ಕೆ ಅಗತ್ಯವಾದ ಕ್ರಮ ಸರ್ಕಾರ ತೆಗೆದುಕೊಳ್ಳುತ್ತೆ ಅಂತ ಭರವಸೆ ನೀಡಿದರು.
ಯುವಿಸಿಇಯ ಪುನಾರಚನೆಗೆ ಸರ್ಕಾರ 25 ಕೋಟಿ ರೂ. ಹಂಚಿಕೆ ಮಾಡಿದ್ದು ಮೊದಲ ಹಂತವಾಗಿ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದ 10 ಕೋಟಿ ರೂ.ಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು. ಹೊಸದಾಗಿ ಏರೋನಾಟಿಕಲ್ ಹಾಗೂ ಸ್ಪೇಸ್ ಎಂಜಿನಿಯರಿಂಗ್ ಪ್ರಾರಂಭ ಮಾಡಲು ಯುವಿಸಿಇ ಮುಂದಾಗಿದೆ. ಇದಕ್ಕೂ ಅಗತ್ಯ ಸಹಕಾರ ಕೊಡುತ್ತೇವೆ ಅಂದರು.
ಯುವಿಸಿಇಯನ್ನು ಬೆಂಗಳೂರು ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಡುವೆ ವಿಭಜಿಸಿದ ನಂತರ ಉದ್ಭವವಾಗಿದ್ದ ಸಮಸ್ಯೆಗೆ ರಂಗನಾಥ ಸಮಿತಿಯ ವರದಿ ಪರಿಹಾರ ಸೂಚಿಸಿದೆ. ಈ ಸಮಿತಿಯ ಶಿಫಾರಸು ಹಾಗೂ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಲಹೆಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕ ವಿಶ್ವವಿದ್ಯಾಲಯಗಳ ಹಲವು ಮಾದರಿಗಳು ನಮ್ಮ ಮುಂದಿವೆ. ಎಲ್ಲ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲೂ ತಪ್ಪಾಗದಂತೆ ಸರಿಯಾದ ನಿರ್ಧಾರ ಕೈಗೊಂಡು ಯುವಿಸಿಇಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಅಂತ ಸ್ಪಷ್ಟಪಡಿಸಿದರು.