ಲಕ್ನೋ: ಸಕಾರಾತ್ಮಕ ರಾಜಕಾರಣಕ್ಕಾಗಿ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದರು.
ನೋಯ್ಡಾದಲ್ಲಿ ಮನೆ-ಮನೆ ಪ್ರಚಾರ ನಡೆಸುತ್ತಿರುವಾಗ ಸ್ಲಂ ಪ್ರದೇಶಗಳ ಜನರೊಂದಿಗೆ ಸಂವಾದ ನಡೆಸಿದ ಅವರು, ಸಕಾರಾತ್ಮಕ ರಾಜಕಾರಣಕ್ಕಾಗಿ ನಮ್ಮನ್ನು ಗೆಲ್ಲಿಸಿ ಪ್ರತಿಸ್ಪರ್ಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.
ನೋಯ್ಡಾದ ಬಿಜೆಪಿ ಶಾಸಕ ಪಂಕಜ್ ಸಿಂಗ್ರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಇಲ್ಲಿಯ ಜನರಿಗೆ ಯಾವುದೇ ಮೂಲಭೂತ ಸೌಕರ್ಯವನ್ನು ನೀಡಿಲ್ಲ. ಈ ಬಾರಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಅಡಿಪಾಯ ಹಾಕಿ ಎಂದು ತಿಳಿಸಿದರು.
ಇದೇ ವೇಳೆ ಉತ್ತರಪ್ರದೇಶದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದರೆ ಕಾಂಗ್ರೆಸ್ ಕಾರ್ಯತಂತ್ರ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ನಂತರದಲ್ಲಿ ರಾಜಕೀಯ ಸನ್ನಿವೇಶಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಉತ್ತರಿಸಿದರು.
ಪ್ರಚಾರದ ಸಂದರ್ಭದಲ್ಲಿ ಲಡ್ಕಿ ಹೂಂ, ಲಡ್ ಸಕ್ತಿ ಹೂಂ ಘೋಷಣೆಯ ಅಡಿಯಲ್ಲಿ ಪ್ರತ್ಯೇಕವಾಗಿ ಮಹಿಳೆಯರ ಗುಂಪಿನೊಂದಿಗೆ ಸಂವಾದ ನಡೆಸಿದರು. ಜೊತೆಗೆ ವಿಶೇಷಚೇತನರ ಸಮಸ್ಯೆಗಳನ್ನು ಆಲಿಸಿದರು. ಇದನ್ನೂ ಓದಿ: ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಿ: ರಾಕೇಶ್ ಟಿಕಾಯತ್
ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ಅವರ ಮೊದಲ ಭೇಟಿ ಎಂಬುದು ಗಮನಾರ್ಹ ವಿಷಯವಾಗಿದೆ. ಈ ಹಿಂದೆ ಅವರು ಫೇಸ್ಬುಕ್ ಮತ್ತು ಯೂಟ್ಯೂಬ್ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಸಂವಾದಗಳನ್ನು ನಡೆಸುತ್ತಿದ್ದರು. ಇದನ್ನೂ ಓದಿ: ಬಿಜೆಪಿ ತನ್ನ ಬೊಕ್ಕಸ ತುಂಬಲು ಬಡವರ ಜೇಬಿಗೆ ಕತ್ತರಿ ಹಾಕ್ತಿದೆ: ಚರಣ್ ಸಿಂಗ್ ಸಪ್ರಾ
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಫೆಬ್ರವರಿ 10, ಎರಡನೇ ಹಂತದ ಮತದಾನ ಫೆಬ್ರವರಿ 14, ಮೂರನೇ ಹಂತದ ಮತದಾನ ಫೆಬ್ರವರಿ 20, ನಾಲ್ಕನೇ ಹಂತ ಫೆಬ್ರವರಿ 23, ಐದನೇ ಹಂತ ಫೆಬ್ರವರಿ 27, ಆರನೇ ಹಂತ ಮಾರ್ಚ್ 3 ಮತ್ತು ಏಳನೇ ಹಂತ ಮಾರ್ಚ್ 7 ರಂದು ನಡೆಯಲಿದೆ.