ಲಕ್ನೋ: ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳದ ಮೈತ್ರಿಯು ಮತ ಎಣಿಕೆಯವರೆಗೆ ಮಾತ್ರ ಇರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ನಿಮಿತ್ತ ಮುಜಾಫರ್ನಗರದಲ್ಲಿ ಮತದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಎಸ್ಪಿ ಸರ್ಕಾರ ರಚಿಸಿದರೆ, ಅಜಂಖಾನ್ ಸಂಪುಟದ ಭಾಗವಾಗಲಿದ್ದಾರೆ. ಆರ್ಎಲ್ಡಿ ಅಧ್ಯಕ್ಷ ಜಯಂತ್ ಚೌಧರಿ ಅವರು ಹೊರಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಶುಕ್ರವಾರ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಾವು ಒಟ್ಟಿಗೆ ಇದ್ದೇವೆ ಎಂದು ಹೇಳಿದ್ದರು. ಯುಪಿಯಲ್ಲಿ ಎಸ್ಪಿ ಸರ್ಕಾರ ರಚಿಸಿದರೆ, ಜಯಂತ್ ಭಾಯ್ ಅವರನ್ನು ತೆಗೆದುಹಾಕಲಾಗುತ್ತದೆ. ಅಜಂ ಖಾನ್ ಅವರು ಹಿಂತಿರುಗುತ್ತಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಟಿಕೆಟ್ ಹಂಚಿಕೆಯಿಂದ ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಬೆಂಬಲವನ್ನು ಮರಳಿ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಜನವರಿ 26ರಂದು ಜಾಟ್ ನಾಯಕರೊಂದಿಗೆ ಅಮಿತ್ ಶಾ ಸಭೆ ನಡೆಸಿ ಜಯಂತ್ ಚೌಧರಿ ಅವರು ತಪ್ಪು ದಾರಿ ಹಿಡಿದಿದ್ದಾರೆ. ಆರ್ಎಲ್ಡಿ ಅಧ್ಯಕ್ಷರಿಗೆ ತನ್ನ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದ್ದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಉತ್ತರ ಪ್ರದೇಶದಿಂದ ಮಾಫಿಯಾವನ್ನು ನಿರ್ಮೂಲನೆ ಮಾಡಿದೆ. ಬೇರೆ ಪಕ್ಷಗಳು ಮತ್ತೆ ಸರ್ಕಾರ ರಚಿಸಿದರೆ ಉತ್ತರಪ್ರದೇಶದಲ್ಲಿ ಮಾಫಿಯಾ ಮತ್ತೆ ಬರಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಇನ್ನು ಮುಂದೆ ಮಾಸ್ಕ್ ಹಾಕಿಕೊಂಡೇ ಐಫೋನ್ ಫೇಸ್ ಐಡಿ ಅನ್ಲಾಕ್ ಮಾಡ್ಬೋದು!
ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 7 ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ. ಇದನ್ನೂ ಓದಿ: ಸ್ವಘೋಷಿತ ದೇವಮಾನವನಿಗೆ ಮಗಳನ್ನೇ ದಾನ ಮಾಡಿದ ತಂದೆ -ಛೀಮಾರಿ ಹಾಕಿದ ಕೋರ್ಟ್