ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸನ್ನ ಚಂದ್ರಕಾಂತ್ ಶೇಠ್ ಅವರು ಬಂಗಾರದಲ್ಲಿ ತಯಾರಿಸಿದ ಕಿರು ಪ್ರತಿಕೃತಿಗಳು ದೇಶದ ಪ್ರತಿಷ್ಠಿತ ದಾಖಲೆಗಳ ಪುಟ ಸೇರಿವೆ.
ಮಹಾತ್ಮ ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ನಿಮಿತ್ತ ಪ್ರಸನ್ನ ಅವರು ಅತಿ ಸೂಕ್ಷ್ಮವಾಗಿ ತಯಾರಿಸಿದ 150 ಮಿಲಿ ಗ್ರಾಂ. ಚಿನ್ನದ ಚಾಲನೆಯಲ್ಲಿರುವ ‘ಚರಕ’ವನ್ನು ನಿರ್ಮಿಸಿದ್ದರು. ಇದೇ ಸಂದರ್ಭದಲ್ಲಿ 8 ಮಿ.ಗ್ರಾಂ ತೂಕದ ಚಿನ್ನದ ರಾಷ್ಟ್ರಧ್ವಜವನ್ನು ಸಿದ್ಧಪಡಿಸಿದ್ದರು.
ಪ್ರಸನ್ನ ಅವರ ಈ ಅತೀ ಸೂಕ್ಷ್ಮ ಕಲೆಯು ‘ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್’ನ ಪುಟ ಸೇರಿದೆ. 150 ಮಿ.ಗ್ರಾ. ಚಿನ್ನದ ಚಾಲನೆ ಮಾಡಬಹುದಾದ ಅತಿ ಚಿಕ್ಕ ಚರಕವು ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಮತ್ತು ‘ಏಷ್ಯನ್ ಬುಕ್ ಆಫ್ ರೆಕಾರ್ಡ್’ ಗಳಿಸಿಕೊಂಡಿದೆ. 8 ಮಿ.ಗ್ರಾಂ. ತೂಕದ ಚಿನ್ನದ ರಾಷ್ಟ್ರಧ್ವಜ ‘ಇಂಟರ್ ನಾಷನಲ್ ಬುಕ್ ಆಫ್ ರೆಕಾರ್ಡ್’ನ ಪುಟ ಸೇರಿ ವಿಶ್ವ ದಾಖಲೆಗೆ ಸೇರಿದೆ.
ಪ್ರಸನ್ನ ಅವರು ಹೊನ್ನಾವರದ ಮಾರುತಿ ಪ್ರಸನ್ನ ಜ್ಯೂವೆಲ್ಲರಿಯ ಮಾಲೀಕ ಚಂದ್ರಕಾಂತ್ ಶೇಠ್ ಮತ್ತು ಶೋಭಾ ದಂಪತಿಯ ಪುತ್ರರಾಗಿದ್ದಾರೆ. ಅವರು ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸನ್ನ ಅವರು ವಿಶ್ವ ದಾಖಲೆ ಮಾಡುವ ಮೂಲಕ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.