ಕಾಡು ಪ್ರಾಣಿಗಳನ್ನ ಬೇಟೆಯಾಡಿ ಮಾರಾಟ ಮಾಡುತ್ತಿದ್ದ ಆರು ಜನರ ಬಂಧನ

Public TV
1 Min Read
KWR ARREST AV 3

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅರಣ್ಯದಲ್ಲಿ ವನ್ಯಜೀವಿ ಬೇಟೆಯಾಡಿ ಅವುಗಳ ಚರ್ಮ, ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರು ಜನರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಅಂಕೋಲ ಹಾಗೂ ಕುಮಟಾ ಮೂಲದ ಶ್ರೀಧರ್ ನಾಗೇಶ್ ಬಂಡಾರಿ, ರಾಮಚಂದ್ರ ಕುಪ್ಪುಗೌಡ, ಮಹೇಶ್ ಗೌಡ, ಈಶ್ವರ್ ಗೌಡ, ಅಶೋಕ್ ಬಂಡಾರಿ ಮತ್ತು ರಾಜು ನಾಯ್ಕ ಬಂಧಿತ ಆರೋಪಿಗಳು. ಸಿನಿಮಿ ರೀತಿಯಲ್ಲಿ ಪ್ಲಾನ್ ರೂಪಿಸಿದ್ದ ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿದ್ದಾರೆ.

ಅಂಕೋಲದ ಅಭಿಷೇಕ್ ದಿನಕರ್ ನಾಯಕ್ ಎಂಬವನನ್ನು ಕುಮಟಾ ಅರಣ್ಯ ಅಧಿಕಾರಿಗಳು ಶನಿವಾರ ಬಂಧಿಸಿದ್ದರು. ಅಭಿಷೇಕ್‍ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತನ್ನ ಜಾಲವನ್ನು ಬಿಚ್ಚಿಟ್ಟಿದ್ದಾನೆ. ಈ ಮಾಹಿತಿ ಆಧಾರ ಮೇಲೆ ಉಳಿದ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ಇಂದು ಆರು ಜನರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಸುಮಾರು ವರ್ಷಗಳಿಂದ ವನ್ಯಜೀವಿ ಬೇಟೆ ಆಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ, ಮಾಂಸ, ಚರ್ಮ, ಮೂಳೆಗಳನ್ನು ಮಾರಾಟ ಮಾಡುತ್ತಿದ್ದರು. ವೈಲ್ಡ್ ಕ್ಯಾಟ್ ಪ್ರಾಣಿಯ ಚರ್ಮ ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ವಿರುದ್ಧ ವನ್ಯಜೀವಿ ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇಂತಹದ್ದೇ ಘಟನೆಯೊಂದು ಇಂದು ಮೈಸೂರಿನಲ್ಲಿ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಜೀವಂತ ಚಿಪ್ಪು ಹಂದಿಯನ್ನು ರಕ್ಷಿಸಿದ್ದಾರೆ. ಇದನ್ನು ಓದಿ: ವಿದೇಶಕ್ಕೆ ಚಿಪ್ಪು ಹಂದಿ ಸಾಗಾಟ ಯತ್ನ-ಇಬ್ಬರ ಬಂಧನ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *