ಕಾರವಾರ: ಬಾಯ್ಲರ್ ಸ್ಫೋಟಗೊಂಡು ನಾಲ್ಕು ಜನ ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಗಸೂರಿನಲ್ಲಿರುವ ಪ್ರಕೃತಿ ಆಯುರ್ವೇದಿಕ್ ಪ್ರಾಡಕ್ಟ್ಸ್ ಕಂಪನಿಯಲ್ಲಿ ನಡೆದಿದೆ. ರಘು ನಾಯ್ಕ(25), ಸಂತೋಷ್ ಪೂಜಾರ(19), ಲಖನ್ ತೂರಿ(21) ಹಾಗೂ ರಾಜೇಂದ್ರ(37) ತೀವ್ರ ಗಾಯಗೊಂಡಿದ್ದಾರೆ.
ಬಾಯ್ಲರ್ ಘಟಕದ ಬಳಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಏರ್ ಪ್ರೆಷರ್ ನಿಂದ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ನಡೆಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅವಘಡ ತಪ್ಪಿಸಿದ್ದಾರೆ. ಸ್ಥಳಕ್ಕೆ ಅಂಕೋಲಾ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.