ಲಕ್ನೋ: ಆಸ್ಪತ್ರೆಯಲ್ಲಿ ಸ್ಟ್ರೆಚರ್ ಹಾಗೂ ವ್ಹೀಲ್ ಚೇರ್ ಸೌಲಭ್ಯವಿಲ್ಲದೇ ಅತ್ಯಾಚಾರಗೊಂಡಿದ್ದ ಅಪ್ರಾಪ್ತ ಮಗಳನ್ನು ತಂದೆಯೋರ್ವ ಬೆನ್ನಿನ ಮೇಲೆ ಹೊತ್ತೊಯ್ದ ಘಟನೆ ಉತ್ತರ ಪ್ರದೇಶದ ಮಾರ್ಹೆರಾ ಪ್ರದೇಶದಲ್ಲಿ ನಡೆದಿದೆ.
ಡಿಸೆಂಬರ್ 14 ರಂದು ಅತ್ಯಾಚಾರವಾದ ಮಗಳನ್ನು ವೈದ್ಯಕೀಯ ತಪಾಸಣೆಗೆಂದು ಕರೆದುಕೊಂಡ ಬಂದ ತಂದೆಯೋರ್ವ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಹಾಗೂ ವ್ಹೀಲ್ ಚೇರ್ ಸೌಲಭ್ಯವಿಲ್ಲದೆ ತನ್ನ ಮಗಳನ್ನು ಬೆನ್ನಿನ ಮೇಲೆ ಹೋತ್ತುಕೊಂಡು ಹೋಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
योगी जी के राज में पल पल मर रही है बेटियाँ, पल पल सह रही है बेटियाँ।
बेहद दुःखद। https://t.co/8elNWZFL7f
— Uttar Pradesh Mahila Congress (@UttarPradeshPMC) December 19, 2019
ಡಿ.14 ರಂದು ತನ್ನ ಮನೆಯಲ್ಲಿದ್ದ 15 ವರ್ಷದ ಬಾಲಕಿಯನ್ನು ಆಕೆಯ ಮನೆಯ ಪಕ್ಕದಲ್ಲಿ ವಾಸವಿದ್ದ 19 ವರ್ಷದ ಯುವಕ ಅಂಕಿತ್ ಯಾದವ್ ಮನೆಯಿಂದ ಎಳೆದುಕೊಂಡು ಹೋಗಿ ಹಲವು ಗಂಟೆಗಳ ಕಾಲ ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ಬಾಲಕಿಯು ಆತನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆಗ ಅವಳ ಕಾಲು ಮತ್ತು ಕೈಗೆ ಗಂಭೀರವಾದ ಗಾಯವಾಗಿದ್ದು, ನಡೆಯಲು ಆಗದ ಸ್ಥಿತಿಗೆ ತಲುಪಿದ್ದಾಳೆ.
ಇದಾದ ನಂತರ ಬಾಲಕಿಯ ತಂದೆ ದೂರು ನೀಡಲು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆ ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಆಗ ತಂದೆ ಮತ್ತು ಬಾಲಕಿ ಹಾಗೂ ಅವರ ಜೊತೆ ಒಬ್ಬರು ಮಹಿಳಾ ಪೇದೆ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಗೆ ಬಂದ ಸಮಯದಲ್ಲಿ ನಡೆಯಲಾರದ ಮಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲು ವ್ಹೀಲ್ ಚೇರ್ ಅಥವಾ ಸ್ಟ್ರೆಚರ್ ಸಿಗದೇ ಇದ್ದಾಗ ತಂದೆ ತನ್ನ ಮಗಳನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗಿ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ.
ಈ ಫೋಟೋವನ್ನು ಸ್ಥಳೀಯರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಈ ಫೋಟೋ ವೈರಲ್ ಆಗಿದೆ. ಹಾಗೆಯೇ ಈ ರೀತಿಯ ಘಟನೆಗಳು ಮತ್ತು ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಯೋಗಿ ಅದಿತ್ಯನಾಥ್ ಸರ್ಕಾರವನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ನಾವು ಡಿಸೆಂಬರ್ 14 ರಂದು ದೂರು ಪಡೆದ ನಂತರ, ಆರೋಪಿಯಾದ 19 ವರ್ಷದ ಅಂಕಿತ್ ಯಾದವ್ ನನ್ನು ಬಂಧಿಸಿದ್ದೇವೆ ಹಾಗೂ ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಈ ಬಗ್ಗೆ ಆಸ್ಪತ್ರೆಯ ಅಡಳಿತ ಮಂಡಳಿಯನ್ನು ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿರುವ ಅವರು, ಈ ಆಸ್ಪತ್ರೆ ಈಗ ತಾನೇ ಆರಂಭಗೊಂಡಿದೆ. ಆದ ಕಾರಣ ಇಲ್ಲಿ ಸೌಲ್ಯಭ್ಯಗಳು ಕಮ್ಮಿ, ಈ ಕಾರಣದಿಂದಲೇ ಅವರಿಗೆ ಬಾಲಕಿಯನ್ನು ಕರೆದುಕೊಂಡು ಹೋಗಲು ಸ್ಟ್ರೆಚರ್ ಹಾಗೂ ವ್ಹೀಲ್ ಚೇರ್ ಸಿಕ್ಕಿಲ್ಲ ಎಂದು ಹೇಳಿದ್ದಾರೆ.