ಲಕ್ನೋ: ಪೊಲೀಸ್ ಪೇದೆಯ ಗುಂಡಿನ ದಾಳಿಗೆ ಬಲಿಯಾದ ಆಪಲ್ ಕಂಪನಿಯ ಸೇಲ್ಸ್ ಮಾನೇಜರ್ ವಿವೇಕ್ ತಿವಾರಿ ಪತ್ನಿ ಕಲ್ಪನಾ ಅವರನ್ನು ಲಕ್ನೋ ಮಹಾನಗರ ಪಾಲಿಕೆಯ ವಿಶೇಷ ಅಧಿಕಾರಿಯನ್ನಾಗಿ ಉತ್ತರ ಪ್ರದೇಶ ಸರ್ಕಾರ ನೇಮಕ ಮಾಡಿದೆ.
ಉತ್ತರ ಪ್ರದೇಶದ ಡಿಸಿಎಂ ದಿನೇಶ್ ಶರ್ಮಾ ಅವರು ಸರ್ಕಾರಿ ಕೆಲಸದ ನೇಮಕ ಪತ್ರವನ್ನು ಕಲ್ಪನಾ ತಿವಾರಿ ಅವರಿಗೆ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ದಿನೇಶ್ ಶರ್ಮಾ, ಈ ದುರಂತ ಘಟನೆಯ ನಂತರ ತಿವಾರಿ ಅವರ ಕುಟುಂಬದೊಂದಿಗೆ ನಾನು ಸತತವಾಗಿ ಸಂಪರ್ಕದಲ್ಲಿ ಇದ್ದೇನೆ. ವಿವೇಕ್ ಅವರು ಶ್ರಮಜೀವಿ. ಈಗಾಗಲೇ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ತಿವಾರಿ ಅವರ ತಾಯಿಗೆ ತಲಾ 5 ಲಕ್ಷ ರೂ ಕೊಟ್ಟಿದ್ದೇವೆ. ತಿವಾರಿ ಪತ್ನಿ ಕಲ್ಪನಾ ಅವರನ್ನು ಮಹಾನಗರ ಪಾಲಿಕೆಯ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿಕೊಂಡಿದ್ದೇವೆ” ಎಂದು ಹೇಳಿದರು. ಇದನ್ನು ಓದಿ: `ನನ್ನ ಎಲ್ಲ ಬೇಡಿಕೆಯನ್ನು ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ’- ಖಾಕಿಗಳ ಗುಂಡೇಟಿಗೆ ಬಲಿಯಾದ ಆಪಲ್ ಸಿಬ್ಬಂದಿಯ ಪತ್ನಿ
ನೇಮಕಾತಿ ಪತ್ರವನ್ನ ಪಡೆದ ಕಲ್ವನಾ ತಿವಾರಿ ಮಾಧ್ಯಮಗಳೊಂದಿಗೆ ಮಾತನಾಡಿ, “ಡಿಸಿಎಂ ಅವರು ನನಗೆ ನೇಮಕಾತಿ ಪತ್ರವನ್ನ ಕೊಟ್ಟಿದ್ದಾರೆ. ಸರ್ಕಾರ ಮಾಡಿದ ಎಲ್ಲಾ ಭರವಸೆಗಳನ್ನ ಪೂರೈಸುವುದಾಗಿ ಮಾತುಕೊಟ್ಟಿದೆ. ತಮ್ಮ ನ್ಯಾಯಕ್ಕಾಗಿ ಎಲ್ಲಾ ರೀತಿಯ ತನಿಖೆಗಳನ್ನ ಸೂಕ್ತವಾಗಿ ನಡೆಸಲಾಗುತ್ತಿದೆ. ಇದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ” ಎಂದು ಹೇಳಿದರು.
ಆಪಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ ಮೇಲೆ ಪೊಲೀಸರು ಗುಂಡೇಟಿಗೆ ಬಲಿಯಾಗಿದ್ದರು. ಈ ಶೂಟೌಟ್ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ಘಟನೆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಲ್ಪನಾ ಭೇಟಿ ಮಾಡಿದ್ದರು. ಈ ಸಂದರ್ಭಲ್ಲಿ ಯೋಗಿ ಆದಿತ್ಯನಾಥ್ ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಗೆ ಉದ್ಯೋಗ, ವಿವೇಕ್ ತಾಯಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv