– ಪೇದೆಗೆ ಅವಾರ್ಡ್ ನೀಡಲು ಶಿಫಾರಸು
ಲಕ್ನೋ: ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ವೃದ್ಧನನ್ನು ರೈಲ್ವೇ ಪೊಲೀಸರೊಬ್ಬರು ಕೆಲವೇ ಸೆಕೆಂಡ್ನಲ್ಲಿ ಪಾರು ಮಾಡಿದ ಘಟನೆ ಉತ್ತರ ಪ್ರದೇಶದ ದೀನ ದಯಾಳ್ ಉಪಾಧ್ಯಾಯ ಜಂಕ್ಷನ್ನಲ್ಲಿ ನಡೆದಿದೆ.
ರೈಲ್ವೇ ಪೊಲೀಸ್ ಅಭಿಷೇಕ್ ಪಾಂಡೆ ಅವರು 70 ವರ್ಷದ ವೃದ್ಧನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯು ಶನಿವಾರ ರಾತ್ರಿ ನಡೆದಿದ್ದು, ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ತೋರಿದ ಅಭಿಷೇಕ್ ಪಾಂಡೆ ಅವರಿಗೆ ಪುರಸ್ಕಾರ ನೀಡಬೇಕು ಎಂದು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೇ?:
ವೃದ್ಧನೊಬ್ಬ ದೀನ ದಯಾಳ್ ಉಪಾಧ್ಯಾಯ ಜಂಕ್ಷನಿನ 6ನೇ ಪ್ಲಾಟ್ಫಾರಂ ಮೇಲೆ ಕುಳಿತಿದ್ದ. ಈ ವೇಳೆ ಹೌರಾದಿಂದ ಜಮ್ಮು ಕಡೆಗೆ ಹೊರಟಿದ್ದ ಹೌರಾ-ಜಮ್ಮು ಎಕ್ಸ್ಪ್ರೆಸ್ ರೈಲು ಅದೇ ಪ್ಲಾಟ್ಫಾರಂ ಕಡೆಗೆ ಬರುತ್ತಿತ್ತು. ಆದರೆ ಇದನ್ನು ಗಮನಿಸದ ವೃದ್ಧ ಅಲ್ಲಿಯೇ ಕುಳಿತ್ತಿದ್ದ. ಇದನ್ನು ನೋಡಿ ಅಭಿಷೇಕ್ ಪಾಂಡೆ ಅವರು ತಕ್ಷಣವೇ ಆತನನ್ನು ರಕ್ಷಿಸಿದ್ದಾರೆ.
ಅಭಿಷೇಕ್ ಪಾಂಡೆ ಅವರ ಸಮಯ ಪ್ರಜ್ಞೆಯಿಂದ ಕೆಲವೇ ಸೆಕೆಂಡ್ನಲ್ಲಿ ಭಾರೀ ಅನಾಹುತ ತಪ್ಪಿದ್ದು, ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯವನ್ನು ಗಮನಿಸಿದ ಪ್ರಯಾಣಿಕರು ಅಭಿಷೇಕ್ ಪಾಂಡೆ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.