ದಾವಣಗೆರೆ: ಆಸ್ಪತ್ರೆಯಲ್ಲಿ ಉಪಯೋಗಿಸಿ ಬಿಸಾಡಿರುವ ರಾಶಿ ರಾಶಿ ಮೆಡಿಕಲ್ ತ್ಯಾಜ್ಯ ಸ್ಥಳೀಯ ಗುಜರಿ ಅಂಗಡಿಯಲ್ಲಿ ಪತ್ತೆಯಾಗಿರುವ ಘಟನೆ ಗಾಂಧಿನಗರದ ಬಳಿ ನಡೆದಿದೆ.
ಗಾಂಧಿನಗರದ ಸಾರ್ವಜನಿಕ ರುದ್ರಭೂಮಿಯ ಹಿಂಭಾಗ ಗುಜುರಿ ಅಂಗಡಿಯಲ್ಲಿ ಉಪಯೋಗಿಸಿದ ಸೂಜಿ-ಸಿರಂಜ್ಗಳ ಮೂಟೆಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಮಾಡಿದೆ.
ಆರೋಗ್ಯ ಇಲಾಖೆಯ ಪ್ರಕಾರ ಆಸ್ಪತ್ರೆಯಲ್ಲಿ ಒಂದು ಬಾರಿ ಉಪಯೋಗಿಸಿದ ಯಾವುದೇ ವಸ್ತುಗಳನ್ನು ಮರುಬಳಕೆ ಮಾಡುವಂತಿಲ್ಲ. ಬಯೋ ಮೆಡಿಕಲ್ ವೇಸ್ಟ್ ಅನ್ನು ಆಸ್ಪತ್ರೆಯಲ್ಲಿ ಬಳಸಿದ ನಂತರ ಅವುಗಳನ್ನು ಹೊರಗೂ ಬಿಡದೇ ಆಸ್ಪತ್ರೆಯಲ್ಲಿ ಸುಟ್ಟುಹಾಕಬೇಕು, ಇಲ್ಲವೇ ಆಳವಾಗಿ ಮಣ್ಣಿನಲ್ಲಿ ಹೂತು ಹಾಕಬೇಕು.
ಹೀಗಿರುವಾಗ ಕ್ವಿಂಟಲ್ ಗಟ್ಟಲೇ ಮೆಡಿಕಲ್ ತ್ಯಾಜ್ಯ ಗುಜುರಿ ಅಂಗಡಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೆಡಿಕಲ್ ತ್ಯಾಜ್ಯಗಳನ್ನು ಪುನರ್ ಬಳಕೆ ಮಾಡುವ ಮಾಫಿಯಾ ತಲೆ ಎತ್ತುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.