ನವದೆಹಲಿ: ಬಾಲಿವುಡ್ ತಾರೆ ಉರ್ಮಿಳಾ ಮಾತೋಂಡ್ಕರ್ ಅವರು ಬುಧವಾರದಂದು ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಅವರ ನಿವಾಸದಲ್ಲಿಯೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಲೋಕಸಭೆ ಚುನಾವಣೆ ಸಮಯದಲ್ಲಿಯೇ ಉರ್ಮಿಳಾ ಅವರು ಕಾಂಗ್ರೆಸ್ ಸೇರ್ಪಡೆಯಾಗಿ, ಪಕ್ಷಕ್ಕಾಗಿ ಕೆಲಸ ಮಾಡಲು ಇಚ್ಚಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣ್ದೀಪ್ ಸುರ್ಜೆವಾಲ ಅವರು, ಕಾಂಗ್ರೆಸ್ ಪಕ್ಷ ಸೇರಿರುವ ಉರ್ಮಿಳಾ ಅವರು ಇನ್ಮುಂದೆ ಪಕ್ಷದ ಸಿದ್ದಾಂತವನ್ನು ಅರಿತು, ಪಕ್ಷವನ್ನು ಬಲಗೊಳಿಸುವ ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಉರ್ಮಿಳಾ ಅವರು, ನಾನು ಕಾಂಗ್ರೆಸ್ ಸಿದ್ದಾಂತವನ್ನು ನಂಬುತ್ತೇನೆ. ಆದರಿಂದ ನಾನು ಕೈ ಪಕ್ಷ ಸೇರಿದ್ದೇನೆ. ನಾನು ಕೇವಲ ಚುನಾವಣಾ ಉದ್ದೇಶಕ್ಕಾಗಿ ಪಕ್ಷಕ್ಕೆ ಸೇರಿಲ್ಲ ಎಂದರು. ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಭಾಗಿಯಾಗಿತ್ತು. ಹಾಗೆಯೇ ಕಾಂಗ್ರೆಸ್ ಸೇರುವ ಮೂಲಕ ದೇಶದೊಳಗಡೆ ಕಳೆದು ಐದು ವರ್ಷಗಳಿಂದ ನಡೆಯುತ್ತಿರುವ ಆಂತರಿಕ ದಾಳಿ ಹಾಗೂ ಇನ್ನು ಹಲವು ವಿಚಾರಗಳ ಬಗ್ಗೆ ಧ್ವನಿಯೆತ್ತುವ ಅವಕಾಶ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಮರಕ್ಕೆ ಮುಂಬೈ ಉತ್ತರ ಕ್ಷೇತ್ರದಿಂದ ಉರ್ಮಿಳಾ ಅವರಿಗೆ ಕಾಂಗ್ರೆಸ್ ಟಿಕಿಟ್ ನೀಡಲಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.