ನವದೆಹಲಿ: ಹೋಳಿ ಹಬ್ಬದಂದು ದುಷ್ಕರ್ಮಿಗಳು ಬಲೂನ್ನಲ್ಲಿ ಮೂತ್ರ ತುಂಬಿಸಿ ಯುವತಿಯ ಮೇಲೆ ಎಸೆದಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಬುಧವಾರ ಸಂಜೆ ದೆಹಲಿ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿನಿ ಅಮರ್ ಕಾಲೋನಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ದುರ್ಷ್ಕಮಿಗಳು ಆಕೆಯ ಮೇಲೆ ಬಲೂನ್ ಎಸೆದಿದ್ದಾರೆ.
ಬಲೂನ್ ನನ್ನ ಎದೆಯ ಮೇಲೆ ಜೋರಾಗಿ ಬಿತ್ತು. ನೋವನ್ನು ತಾಳಲಾರದೆ ನಾನು ಅಲ್ಲಿಯೇ ಬಿದ್ದು ಹೋದೆ. ನಂತರ ನಾನು ಎದ್ದು ನೋಡುವಷ್ಟರಲ್ಲಿ ಅವರು ಅಲ್ಲಿಂದ ಹೋಗಿ ಬಿಟ್ಟಿದ್ದರು. ಬಲೂನ್ ಹೊಡೆದಾಗ ಅದರಿಂದ ಮೂತ್ರದ ವಾಸನೆ ಬರುತ್ತಿತ್ತು ಎಂದು ಗುರುವಾರ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ರೀತಿಯ ಘಟನೆ ಶನಿವಾರದಂದು ದೆಹಲಿ ವಿಶ್ವವಿದ್ಯಾಲಯದ ಮಹಿಳಾ ಶ್ರೀ ರಾಮ್ ಕಾಲೇಜಿನಲ್ಲಿ ನಡೆದಿತ್ತು. ಈ ಬಗ್ಗೆ ಎಲ್ಎಸ್ಆರ್ ಸ್ಟೂಡೆಂಟ್ ಯೂನಿಯನ್ ಪ್ರತಿಭಟನೆ ನಡೆಸಿತ್ತು.