ಜೈಪುರ: ಹುಟ್ಟುಹಬ್ಬದಂದು ತಂದೆ ಹೊಸ ಮೊಬೈಲ್ ಕೊಡಿಸಿಲ್ಲವೆಂದು ಮನನೊಂದು 18 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಈ ಘಟನೆ ಜೈಪುರ ಸೊಡಲ ಪ್ರದೇಶದಲ್ಲಿ ನಡೆದಿದೆ. ಪಬ್ ಜಿ ಆಡಲು ಹೊಸ ಮೊಬೈಲ್ ಕೊಡಿಸಿಲ್ಲವೆಂಬ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ಈ ಸಂಬಂಧ ಜೈಪುರ ಪೊಲೀಸ್ ಆಯುಕ್ತ ರಾಜ್ ಕುಮಾರ್ ಗುಪ್ತಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, 12ನೇ ತರಗತಿಯ 18 ವರ್ಷದ ಯುವತಿ ಫೆಬ್ರವರಿ 13ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ತನ್ನ ಬರ್ತ್ ಡೇ ಯಂದು ಪಬ್ ಜಿ ಆಡಲು ತನಗೆ ಹೊಸ ಮೊಬೈಲ್ ಕೊಡಿಸಬೇಕೆಂದು ಪೋಷಕರ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾಳೆ. ಅಂತೆಯೇ ತಂದೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಹೊಸ ಫೋನ್ ಕೊಡಿಸುವುದಾಗಿ ಭರವಸೆ ಕೂಡ ನೀಡಿದ್ದರು ಎಂದರು.
ಆದರೆ ಕೆಲ ದಿನಗಳೇ ಕಳೆದರೂ ತಂದೆ ಹೊಸ ಫೋನ್ ಕೊಡಿಸಲಿಲ್ಲ. ಇದರಿಂದ ಯುವತಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ ಪ್ರಭಾವಿ ರಾಜಕಾರಣಿ