ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು.
ಶಿವಮೊಗ್ಗ: ಹಣಕಾಸಿನ ವಿಚಾರಕ್ಕೆ ಯುವಕರ ಗುಂಪಿನ ನಡುವೆ ಗಲಾಟೆ ನಡೆದು, ಯುವಕನೋರ್ವನ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿಯಲ್ಲಿ (Bhadravathi) ಶುಕ್ರವಾರ ರಾತ್ರಿ ನಡೆದಿದೆ.
ಹತ್ಯೆಯಾದ ಯುವಕನನ್ನು ಕೋಡಿಹಳ್ಳಿ ಬಡಾವಣೆ ನಿವಾಸಿ ನವೀನ್ (25) ಎಂದು ಗುರುತಿಸಲಾಗಿದೆ.ಹತ್ಯೆಯಾದ ನವೀನ್ ಹಾಗೂ ಆತನ ಸ್ನೇಹಿತ ಅರುಣ್ ಕುಮಾರ್ ಇಬ್ಬರೂ ಸ್ನೇಹಿತರಾಗಿದ್ದು, ಮೊಬೈಲ್ ಕಳ್ಳತನ ಇವರ ಕಸುಬಾಗಿತ್ತು. ಕಳವು ಮಾಡಿದ ಮೊಬೈಲ್ಗಳನ್ನು ಸದಾತ್ ಎಂಬವನ ಬಳಿ ಮಾರಾಟ ಮಾಡುತ್ತಿದ್ದರು. ಸದಾತ್ ಮೊಬೈಲ್ ಖರೀದಿಸಿ ಬಾಕಿ ಹಣವನ್ನು ಉಳಿಸಿಕೊಂಡಿದ್ದ. ಬಾಕಿ ಹಣವನ್ನು ಕೇಳಲು ನವೀನ್ ಹಾಗೂ ಅರುಣ್ ಸತ್ಯಸಾಯಿನಗರಕ್ಕೆ ತೆರಳಿದ್ದರು.
ಇದನ್ನೂ ಓದಿ: ಕಲಬೆರಕೆ ಹಾಲು ಸರಬರಾಜು ಶಂಕೆ – ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ
ಬಾಕಿ ಹಣ ವಸೂಲಿಗೆ ತೆರಳಿದ್ದ ವೇಳೆ ನವೀನ್, ಅರುಣ್ ಕುಮಾರ್ ಹಾಗೂ ಸದಾತ್ ಗುಂಪಿನ ನಡುವೆ ಗಲಾಟೆ ನಡೆದಿದೆ. ರಂಜಾನ್ (Ramzan) ಹಬ್ಬ ಇರುವ ಕಾರಣ ಹಣ ಇಲ್ಲ. ನಂತರ ಕೊಡುವುದಾಗಿ ಸದಾತ್ ತಿಳಿಸಿದ್ದಾನೆ. ಹಣ ಕೊಡುವುದಿಲ್ಲ ಎಂಬ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆ ನಡೆದು ಹೊಡೆದಾಡಿಕೊಂಡಿದ್ದಾರೆ. ನಂತರ ಸದಾತ್ ತನ್ನ ಬಳಿಯಿದ್ದ ಚಾಕುವಿನಿಂದ ನವೀನ್ಗೆ ಇರಿದಿದ್ದಾನೆ. ಚಾಕು ಇರಿತಕ್ಕೊಳಗಾದ ನವೀನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಘಟನೆ ನಂತರ ಯುವಕರು ಸ್ಥಳದಿಂದ ಪರಾರಿಯಾಗಿದ್ದರು. ನಂತರ ಸ್ಥಳೀಯರು ನವೀನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ನವೀನ್ ಅಸುನೀಗಿದ್ದ. ಇದನ್ನೂ ಓದಿ: ಬರೋಬ್ಬರಿ 5 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ
ಹಿಂದೂ ಯುವಕನನ್ನು ಮುಸ್ಲಿಂ ಯುವಕರು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಭಜರಂಗದಳ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆ ಮುಖಂಡರು ಆಸ್ಪತ್ರೆ ಬಳಿ ಜಮಾಯಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡರು. ಅಲ್ಲದೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು. ಬಳಿಕ ಭಜರಂಗದಳ (Bajarang Dal) ಕಾರ್ಯಕರ್ತರು, ಹಿಂದೂ ಸಂಘಟನೆಯ ಮುಖಂಡರು ಸ್ಥಳದಿಂದ ತೆರಳಿದರು. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – 1 ಕೋಟಿ 65 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಹೊಸಮನೆ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸದಾತ್ ಹಾಗೂ ಸುಹೈಲ್ ಎಂದು ಗುರುತಿಸಲಾಗಿದೆ. ಅಲ್ಲದೇ ಭದ್ರಾವತಿಯಲ್ಲಿ ಹಿಂದೂಗಳಿಗೆ ರಕ್ಷಣೆ ನೀಡುವಂತೆ ಭಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: BWSSB ಅರೆಬರೆ ಕಾಮಗಾರಿ – ಗುಂಡಿಗೆ ಬಿದ್ದ ಬಾಲಕ ಬಲಿ