– ಕಾವೇರಿಗೆ ಇರುವ ಒಲವು ಕೃಷ್ಣೆಗೆ ಯಾಕಿಲ್ಲ?
– ಯೋಜನೆಗೆ ಅಡಿಗಲ್ಲು ಹಾಕಿ 60 ವರ್ಷವಾದ್ರೂ ಇನ್ನೂ ಪರಿಹಾರ ಸಿಕ್ಕಿಲ್ಲ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (Upper Krishna Project) ಹೋರಾಟದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ (North Karnataka Separate State) ಕೂಗು ಕೇಳಿಬಂದಿದೆ. ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ (Siddu Savadi) ಅವರಿಂದಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರ ಧ್ವನಿ ಎತ್ತಿದರು.
ಆಲಮಟ್ಟಿ (Almatti Dam) ಹಿನ್ನೀರಿನಿಂದ ಬಾಧಿತರಾಗಿರುವ ಸಂತ್ರಸ್ತರಿಗೆ ನ್ಯಾಯ ಕೊಡದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಲಮಟ್ಟಿ ಜಲಾಶಯದ ಕೃಷ್ಣಾ ಮೇಲ್ದಂಡೆ ಸಮಸ್ಯೆಗೆ ಪರಿಹಾರ ನೀಡಿ, ಇಲ್ಲವೇ ನಮಗೆ ಪ್ರತ್ಯೇಕ ರಾಜ್ಯ ಒಡೆದು ಕೊಡಿ ಎಂದು ಸಿದ್ದು ಸವದಿ ಆಗ್ರಹಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ನಡೆಯುತ್ತಿರುವ ಸಂತ್ರಸ್ಥರ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂತ್ರಸ್ತರು ಹಾಗೂ ಹೋರಾಟ ಸಮಿತಿ ಸದಸ್ಯರ ಜೊತೆ ನಗರದ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಇಲಾಖೆಯ ಆಯುಕ್ತರ ಕಛೇರಿಗೆ ಮುತ್ತಿಗೆ ಹಾಕಿ ಮಾತನಾಡಿದ ಅವರು, ಯೋಜನೆಯ ನೀರಾವರಿ ಕಾಮಗಾರಿಗೆ ಅಡಿಗಲ್ಲು ಹಾಕಿ 60 ವರ್ಷ ಆಯ್ತು. ಇಂದಿಗೂ ಕೃಷ್ಣ ಮೇಲ್ದಂಡೆ ಯೋಜನೆಗೆ ಪರಿಹಾರ ಸಿಕ್ಕಿಲ್ಲ. ಇಲ್ಲಿ ಸಂತ್ರಸ್ತರು ಒದ್ದಾಡುತ್ತಿದ್ದಾರೆ ಯಾರು ಕೂಡ ಇವರ ಹಿತ ಕಾಡುತ್ತಿಲ್ಲ ಎಂದು ಆಗ್ರಹಿಸಿ ಎಲ್ಲಾ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಗ್ಯಾರಂಟಿಯಿಂದ ದುಡ್ಡು ಇಲ್ಲದೇ ಇದ್ರೆ ಸರ್ಕಾರಿ ಆಸ್ತಿ ಮಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ: ಎಸ್.ಆರ್ ಪಾಟೀಲ್ ಆಕ್ರೋಶ
ಮಂಡ್ಯ, ಮೈಸೂರು ಭಾಗದಲ್ಲಿ ಕಾವೇರಿಗೆ ಸಮಸ್ಯೆಯಾದರೆ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ರಾಜ್ಯ ಸರ್ಕಾರವೇ ಶರಣಾಗುತ್ತದೆ. ಕಾವೇರಿ ಹೋರಾಟಗಾರರಿಗೆ ಏನು ಬೇಕು ಅದನ್ನೆಲ್ಲ ಮಾಡಿಕೊಡುತ್ತಾರೆ. ಆದರೆ ನಮ್ಮ ಹೋರಾಟಕ್ಕೆ ಏನು ಮಾಡುವುದಿಲ್ಲ. ಹೀಗೆ ಮುಂದುವರೆದರೆ ಪ್ರತ್ಯೇಕ ಉತ್ತರ ಕರ್ನಾಟಕ ಬೇಡಿಕೆಯ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.
ಸಂತ್ರಸ್ತರ ಹೋರಾಟಕ್ಕೆ ಬೆಂಬಲವಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಪರಿಹಾರವಾಗುತ್ತಾ? ಪರಿಹಾರ ಆಗುತ್ತದೆ ಎಂದರೆ ನಾವು ರಾಜೀನಾಮೆ ನೀಡುತ್ತೇವೆ. ರಾಜಕಾರಣ ಬೆರೆಸುವುದು ಬೇಡ, ಮೂಗಿಗೆ ತುಪ್ಪ ಒರೆಸುವ ಕೆಲಸ ಆಗಬಾರದು. ಸದನದ ಬಾವಿಗಿಳಿದು ಹೋರಾಟ ಮಾಡಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಒಂದು ವೇಳೆ ರಾಜೀನಾಮೆ ನೀಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದಾದರೆ ಮೊದಲು ನಾನೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.