ಲಕ್ನೋ: ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಕಾನ್ಪುರ ಪೊಲೀಸರು ಗಂಟೆಗಳ ಸಿಸಿಟಿವಿ ಮತ್ತು ವೀಡಿಯೋ ತುಣುಕಿನ ಮೂಲಕ 40 ಗಲಭೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಶುಕ್ರವಾರದ ಹಿಂಸಾಚಾರದಲ್ಲಿ ಈ ವ್ಯಕ್ತಿಗಳು ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ 40 ಗಲಭೆಕೋರರ ಫೋಟೋಗಳನ್ನು ಬಿಡುಗಡೆ ಮಾಡಿದ ಪೊಲೀಸರು, ಸಾರ್ವಜನಿಕರಿಗೆ ಇವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೂ ಕೂಡಲೇ ತಿಳಿಸಿ ಎಂದು ಘೋಷಿಸಿದ್ದಾರೆ.
ಫೋಟೋಗಳು ಸಾರ್ವಜನಿಕವಾಗಿ ಪ್ರಕಟವಾದಾಗಿನಿಂದ ಪೊಲೀಸರಿಗೆ ಫೋನ್ ಕರೆಗಳು ಬರುತ್ತಿವೆ. 40 ಶಂಕಿತರ ಪೈಕಿ ನಾಲ್ವರ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಇಕ್ಕಟ್ಟಿಗೆ ಸಿಲುಕಿದ ಚಾಮರಾಜಪೇಟೆ ಪೊಲೀಸರು
ಉತ್ತರ ಪ್ರದೇಶ ಪೊಲೀಸರು ಹಿಂಸಾಚಾರದ ಪ್ರಮುಖ ಶಂಕಿತ ವ್ಯಕ್ತಿಗಳ ಫೋಟೋಗಳನ್ನು ಪೀಡಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಹಾಕಲು ನಿರ್ಧರಿಸಿದ್ದಾರೆ. ಅಲ್ಲದೇ ಶಂಕಿತರ ಬಗ್ಗೆ ಮಾಹಿತಿ ನೀಡಲು ಫೋಟೋಗಳ ಕೆಳಗೆ ಸ್ಟೇಷನ್ ಹೌಸ್ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 3 ರ ಹಿಂಸಾಚಾರದಲ್ಲಿ ಭಾಗವಹಿಸಿದ್ದಾರೆ ಎನ್ನಲಾದ ಸುಮಾರು 20 ಪ್ರಮುಖ ಆರೋಪಿಗಳ ಭಾವಚಿತ್ರವಿರುವ 25 ಫೋಟೋಗಳನ್ನು ಪೀಡಿತ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಹಾಕಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ), ಪ್ರಮೋದ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಂಪೂರ್ಣ ಪಠ್ಯ ಪುಸ್ತಕ ಪರಿಷ್ಕರಣೆ ಕೈ ಬಿಡೋಲ್ಲ: ಬಿ.ಸಿ.ನಾಗೇಶ್
ನಾವು ಇನ್ನೂ 100 ಗಲಭೆಕೋರರನ್ನು ಸಿಸಿಟಿವಿ ದೃಶ್ಯಗಳು ಮತ್ತು ವೀಡಿಯೊ ತುಣುಕುಗಳ ಮೂಲಕ ಗುರುತಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್, ಕಾನೂನು ಮತ್ತು ಸುವ್ಯವಸ್ಥೆ ಆನಂದ್ ಪ್ರಕಾಶ್ ತಿವಾರಿ ತಿಳಿಸಿದ್ದಾರೆ.
ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಮಾಡಿದ ಟೀಕೆ ಖಂಡಿಸಿ ಜನರು ಬಲವಂತವಾಗಿ ಅಂಗಡಿ ಮುಚ್ಚಲು ಮುಂದಾಗಿದ್ದರು. ಇದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿತ್ತು. ಪೊಲೀಸರು ಟಿಯರ್ ಗ್ಯಾಸ್ ಬಳಸಿ ಘರ್ಷಣೆಯನ್ನು ನಿಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 38 ಮಂದಿಯನ್ನು ಬಂಧಿಸಿದ್ದಾರೆ.